ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭಾ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ರಾಜಸ್ಥಾನದಲ್ಲಿ ರೆಸಾರ್ಟ್ ರಾಜಕೀಯ ಶುರುವಾಗಿದೆ. ಇದೇ ತಿಂಗಳ 10ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಈ ನಿರ್ಧಾರ ಮಾಡಿದೆ. ಶನಿವಾರದೊಳಗೆ ಉದಯಪುರ ಅರಾವಳಿ ರೆಸಾರ್ಟ್ಗೆ ಬರುವಂತೆ ರಾಜಸ್ಥಾನದ ಎಲ್ಲ ಶಾಸಕರಿಗೆ ಕಾಂಗ್ರೆಸ್ ಸೂಚಿಸಿದೆ. ಇಂದು ಮತ್ತು ನಾಳೆ ಕೆಲ ಶಾಸಕರು ಉದಯಪುರಕ್ಕೆ ತೆರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜೊತೆಗೆ ತಮ್ಮನ್ನು ಬೆಂಬಲಿಸುವ ಸ್ವತಂತ್ರ ಶಾಸಕರನ್ನು ಕಾಂಗ್ರೆಸ್ ರೆಸಾರ್ಟ್ಗೆ ತೆರಳುವಂತೆ ಸೂಚಿಸಿದೆ.
ಕಾಂಗ್ರೆಸ್ ಪಕ್ಷವು ಕಳೆದ ತಿಂಗಳು ಉದಯಪುರ ರೆಸಾರ್ಟ್ನಲ್ಲಿ ಚಿಂತನ್ ಶಿಬಿರವನ್ನು ನಡೆಸಿದೆ. ಉದಯಪುರದ ಜೊತೆಗೆ ಜೈಸಲ್ಮೇರ್ನ ಸೂರ್ಯಗಢದಲ್ಲೂ ಕೂಡ ಈಗಾಗಲೇ 40 ಕೊಠಡಿಗಳನ್ನು ಬುಕ್ ಮಾಡಲಾಗಿದೆ. ಹರಿಯಾಣ ಕಾಂಗ್ರೆಸ್ ಶಾಸಕರನ್ನೂ ಜೈಪುರಕ್ಕೆ ಕರೆದೊಯ್ದು ಸಿದ್ಧತೆ ನಡೆಸಲಾಗುತ್ತಿದೆ. ಇದೇ ತಿಂಗಳ 10ರಂದು ನಡೆಯಲಿರುವ ಚುನಾವಣೆಯಲ್ಲಿ ರಾಜಸ್ಥಾನದ ನಾಲ್ಕು ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷದ ರೆಸಾರ್ಟ್ ರಾಜಕಾರಣವನ್ನು ಇದೀಗ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇಷ್ಟೊಂದು ಭಯ ಎಂದು ರಾಜಸ್ಥಾನದ ಬಿಜೆಪಿ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.