ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ದೂ ನನ್ನದೂ ಮುಗಿದ ಅಧ್ಯಾಯ ಎಂದು ಹಿರಿಯ ನಾಯಕ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ನಿನ್ನೆ ಬಿ.ಕೆ. ಹರಿಪ್ರಸಾದ್ ಅವರಿಗೆ ವಿಧಾನ ಪರಿಷತ್ನ ವಿಪಕ್ಷ ನಾಯಕನ ಜವಾಬ್ದಾರಿಯನ್ನು ನೀಡಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಇಬ್ರಾಹಿಂ ಸುದ್ದಿಗೋಷ್ಠಿ ನಡೆಸಿದ್ದು, ಕಾಂಗ್ರೆಸ್ಗೂ ನನಗೂ ಮುಗಿದ ಅಧ್ಯಾಯ ಎಂದಿದ್ದಾರೆ.
ಎಐಸಿಸಿ ತೀರ್ಮಾನ ನೋಡಿ ಸಂತೋಷ ಆಗಿದೆ. ಹರಿಪ್ರಸಾದ್, ಶಿವಕುಮಾರ್ ಒಳ್ಳೆಯ ಟೀಂ. ಇವರಿಬ್ಬರ ವಿಚಾರಧಾರೆಗಳೂ ಒಂದೇ ಆಗಿದೆ. ಅದಕ್ಕೆ ಹರಿಪ್ರಸಾದ್ ನೇಮಕ ಆಗಿದ್ದಾರೆ. ನನ್ನ ಹಿತೈಷಿಗಳ ಸಭೆ ಕರೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಸಿದ್ದರಾಮಯ್ಯ, ದೇವೇಗೌಡರಂಥ ದೊಡ್ಡ ನಾಯಕರನ್ನು ಬಿಟ್ಟು ಬಂದೆ, ಇದೀಗ ನನ್ನ ಸ್ಥಿತಿ ತಬ್ಬಲಿಯಂತೆ ಆಗಿದೆ. ರಾತ್ರಿಯಿಂದ ಸಾಕಷ್ಟು ಕರೆ ಬರುತ್ತಿದೆ. ಆದಷ್ಟು ಬೇಗ ನಿರ್ಣಯ ಹೇಳುತ್ತೇನೆ ಎಂದಿದ್ದಾರೆ.