ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: “ರಾಹುಲ್ ಗಾಂಧಿಯವರು ಸಿದ್ದರಾಮೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರೆ ಆ ಪಕ್ಷ ಎಷ್ಟು ದುರ್ಬಲವಾಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಆ ಪಕ್ಷ ಬಿಟ್ಟು ಎಲ್ಲರೂ ದೂರ ಸರಿಯಬೇಕು” – ಇದು ಬಿಜೆಪಿ ರಾಜ್ಯ ವಕ್ತಾರ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಾಖ್ಯಾನ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
“ಹಿಂದಿನ ದಿನಗಳಲ್ಲಿ ಉತ್ಸವಗಳು ಗಾಂಧಿ ಕುಟುಂಬಕ್ಕೆ ಸೀಮಿತವಾಗಿದ್ದವು. ವಿ.ಪಿ.ಸಿಂಗ್ ಅವರು ರಾಜೀವ್ ಗಾಂಧಿಯವರನ್ನು ಮೀರಿಸುವ ಸಾಧ್ಯತೆ ಗಮನಿಸಿ ಅವರಿಗೂ ಚಿತ್ರಹಿಂಸೆ ಕೊಡಲಾಗಿತ್ತು. ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಉಳಿಯಲು ಬಯಸುತ್ತಿದೆ ಎಂದರೆ ಕಾಂಗ್ರೆಸ್ ಸ್ಥಿತಿ ಎಷ್ಟು ಚಿಂತಾಜಕವಾಗಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದಿದ್ದಾರೆ.
“ಸಮುದಾಯಗಳ ವಿರೋಧಿ ಸಿದ್ದರಾಮಯ್ಯ”
ಸಿದ್ದರಾಮಯ್ಯ ಕೇವಲ ದಲಿತ ವಿರೋಧಿಯಲ್ಲ. ಅವರು ಲಿಂಗಾಯತರ ವಿರೋಧಿಯೂ ಆಗಿದ್ದಾರೆ. ಗೌಡರ, ಒಕ್ಕಲಿಗರ ವಿರೋಧಿ ಎಂದು ನುಡಿದರು. ಮಾಜಿ ಪ್ರಧಾನಿ ದೇವೇಗೌಡರನ್ನು 4 ಜನರು ಒಯ್ಯುವ ಕಾಲ ಬರಲಿದೆ ಎಂದು ರಾಜಣ್ಣ ಹೇಳಿದರು. ಅಂಥ ವ್ಯಕ್ತಿಯನ್ನು ಸಿದ್ದರಾಮೋತ್ಸವದ ಅಧ್ಯಕ್ಷರಾಗಿ ಮಾಡಿದ್ದರೆ ಇದರ ಅರ್ಥ ಏನು? ಸಿದ್ದರಾಮಯ್ಯನವರೇ ಈ ಹೇಳಿಕೆ ಕೊಡಿಸಿರಬಹುದೇ ಎಂದು ಪ್ರಶ್ನಿಸಿದರು.
“ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ 24 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು. ಕೊಟ್ಟ ಮೊತ್ತದಲ್ಲಿ ಮೆಟ್ರೊ, ಪಿಡ್ಲ್ಯುಡಿಗೆ ಹಣ ಖರ್ಚು ಮಾಡಿದ್ದರು. ಇವುಗಳು ದಲಿತರವೇ? ಈ ದುಡ್ಡನ್ನು ಸಿದ್ದರಾಮಯ್ಯ ಬೇರೆ ಉದ್ದೇಶಕ್ಕೆ ಕೊಟ್ಟಾಗ ಮಾತನಾಡದ ಕಾಂಗ್ರೆಸ್ ಪಕ್ಷದ ಧ್ರುವನಾರಾಯಣ್ ಆಗ ಕಡ್ಲೆಪುರಿ ತಿನ್ನುತ್ತಿದ್ದರೇ” ಎಂದು ಪ್ರಶ್ನಿಸಿದರು.
ರಾಜ್ಯದ ಬಿಜೆಪಿ ಸರಕಾರವು ಎಸ್ಸಿ, ಎಸ್ಟಿಗಳಿಗೆ 28 ಸಾವಿರ ಕೋಟಿ ಹಣ ನೀಡಿದೆ. ಆ ಹಣವನ್ನು ಬೇರೆ ಅಭಿವೃದ್ಧಿ ಕಾರ್ಯಕ್ಕೆ ವರ್ಗಾವಣೆ ಮಾಡಿಲ್ಲ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ