ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಮುಂಬೈ, ರಾಯಗಢ, ರತ್ನಗಿರಿ, ಸಿಂಧುದುರ್ಗ, ಕೊಲ್ಹಾಪುರ, ಸತಾರಾ, ಅಮರಾವತಿ ಮತ್ತು ಥಾಣೆಯಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ 8 ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನು ಪಾಲ್ಘರ್, ನಾಸಿಕ್ ಮತ್ತು ಪುಣೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರಿ ಮಳೆಯ ಮುನ್ಸೂಚನೆ ಇರುವ ಕಾರಣ ಮಹಾರಾಷ್ಟ್ರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಶಾಲಾ-ಕಾಲೇಜುಗಳಿಗೆ ಜುಲೈ 16 ರವರೆಗೆ ಸರ್ಕಾರ ರಜೆ ಘೋಷಣೆ ಮಾಡಿದೆ.
ಈ ಹಿಂದೆ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಜುಲೈ 10 ರಿಂದ ಜುಲೈ 13 ರವರೆಗೆ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆಡಳಿತ ಮಂಡಳಿ ಆದೇಶಿಸಿತ್ತು. ಇದೀಗ ವರುಣನ ಅಬ್ಬರ ಮುಂದುವರಿದಿದ್ದು, ರಜೆಯ ಆದೇಶವನ್ನು ಜುಲೈ 16ರವರೆಗೆ ವಿಸ್ತರಿಸಲಾಗಿದೆ.
ಇತ್ತ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತಲುಪುವಂತೆ ಸೂಚಿಸಿದ್ದಾರೆ. ಜನರ ರಕ್ಷಣೆಗೆ ಎನ್ಡಿಆರ್ಎಫ್ ತಂಡಗಳು ಕಾರ್ಯಚರಣೆ ಮಾಡುತ್ತಿವೆ
ಕಳೆದ 24 ಗಂಟೆಗಳಲ್ಲಿ ಮಳೆ ಅಬ್ಬರಕ್ಕೆ ನಾಗ್ಪುರದಲ್ಲಿ10 ಜನರು ಸಾವನ್ನಪ್ಪಿದ್ದಾರೆ. ಜುಲೈ 1ರಿಂದ ಈವರೆಗೆ ಮಳೆಗೆ ಸಿಲುಕಿ 20 ಜನರು ಸಾವನ್ನಪ್ಪಿದ್ದು, 19 ಜನರು ಗಂಭೀರ ಗಾಯಗೊಂಡಿದ್ದಾರೆ.