ಹೊಸದಿಗಂತ ಡಿಜಿಟಲ್ ಡೆಸ್ಕ್
ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಹೆಚ್ಚಿನ ಟಿಕೆಟ್ ನೀಡುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಲು ರಾಜ್ಯ ಕಾಂಗ್ರೆಸ್ ಮುಸ್ಲಿಂ ಮುಖಂಡರು ಮಂಗಳವಾರ ನಿರ್ಧರಿಸಿದ್ದಾರೆ.
ರಾಜ್ಯಸಭಾ ಮಾಜಿ ಉಪ ಸಭಾಪತಿ ಕೆ.ರಹಮಾನ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವರಾದ ಯು.ಟಿ.ಖಾದರ್, ತನ್ವೀರ್ ಸೇಠ್, ಜಮೀರ್ ಅಹಮದ್ ಖಾನ್, ರಹೀಮ್ ಖಾನ್, ಮಾಜಿ ಸಂಸದ ಐ.ಜಿ. ಸನದಿ, ಎಂಎಲ್ಸಿ ನಸೀರ್ ಅಹಮದ್ ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಕಾಂಗ್ರೆಸ್ ಟಿಕೆಟ್ ಕೋರಿ 100 ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಿದ್ದಾರೆ ಎಂದ ಸಲೀಂ ಅಹ್ಮದ್, ‘ನಾವು ಪರಿಶೀಲನೆ ನಡೆಸಿ ಪಕ್ಷಕ್ಕೆ ಪಟ್ಟಿ ನೀಡುತ್ತೇವೆ. ಗೆಲುವೇ ಆಯ್ಕೆಗೆ ಮಾನದಂಡ, ಗೆಲ್ಲುವ ಅವಕಾಶ ಇರುವಲ್ಲೆಲ್ಲಾ ನಾವು ಪ್ರಭಲ ಅಭ್ಯರ್ಥಿಗಳನ್ನು ಹಾಕುತ್ತೇವೆ. ಕಾಂಗ್ರೆಸ್ ನಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆ ಚ್ಚಿನ ಟಿಕೆಟ್ ಸಿಗಬೇಕು ಎಂದು ಹೇಳಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 17 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಅವರಲ್ಲಿ ಏಳು ಮಂದಿ ಗೆದ್ದಿದ್ದರು ಎಂದು ಅವರು ಹೇಳಿದ್ದಾರೆ.
ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಜನವರಿಯಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಐದು ಸಮಾವೇಶಗಳನ್ನು ಒಟ್ಟಾಗಿ ನಡೆಸಲು ಸಭೆ ನಿರ್ಧರಿಸಿತು. ಅಲ್ಪಸಂಖ್ಯಾತ ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗುತ್ತಿದೆ ಎಂದು ಆರೋಪಿಸಿರುವ ಸಲೀಂ ಅಹ್ಮದ್, ‘ಬೇರೆ ಬೇರೆ ಮನೆ, ಬೂತ್ಗಳಿಗೆ ಮತದಾರರನ್ನು ಸ್ಥಳಾಂತರಿಸಲಾಗುತ್ತಿದ್ದು, ಬೆಂಗಳೂರು ಹೊರತುಪಡಿಸಿ ಬೀದರ್, ವಿಜಯಪುರ, ಹುಬ್ಬಳ್ಳಿಯಲ್ಲಿ ಇಂತಹ ಅಕ್ರಮಗಳು ನಡೆದಿವೆʼ ಎಂದು ಆರೋಪಿಸಿದ್ದಾರೆ.
ಜೆಡಿಎಸ್, ಎಸ್ಡಿಪಿಐ ಮತ್ತು ಎಐಎಂಐಎಂ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿವೆ ಎಂಬ ಪ್ರಶ್ನೆಗೆ, ಮುಸ್ಲಿಂ ಮತದಾರರು ಪ್ರಜ್ಞಾವಂತರಾಗಿದ್ದು, ನಿಜವಾದ ಸ್ಪರ್ಧೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಎಂಬುದನ್ನು ಅರಿತಿದ್ದಾರೆ” ಅವರೆಲ್ಲರೂ ನಮ್ಮೊಂದಿಗಿರುತ್ತಾರೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ