ಹೊಸದಿಗಂತ , ಬೆಳಗಾವಿ:
ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ನಾಸಿರ್ ಹುಸೇನ್ ನಾಲ್ಕನೇ ಆರೋಪಿಯನ್ನಾಗಿ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ನಾಸಿರ್ ಮೇಲೆ ಪ್ರಕರಣ ದಾಖಲಿಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಪ್ರಮಾಣ ವಚನ ಸ್ವೀಕರಿಸಲು ಅನುವು ಮಾಡಿಕೊಡಬಾರದು ಎಂದು ಹೇಳಿದರು.
ಬಿಜೆಪಿಯ ನಿರಂತರ ಹೋರಾಟದ ಪ್ರತಿಫಲವಾಗಿ ಮೂವರನ್ನು ಬಂಧಿಸಲಾಗಿದೆ. ರಾಜ್ಯ ಸರ್ಕಾರ ಎಫ್ ಎಸ್ ಎಲ್ ವರದಿಯನ್ನು ಇನ್ನೂ ಬಹಿರಂಗೊಳಿಸಿಲ್ಲ. ಈ ಬಗ್ಗೆ ಸರ್ಕಾರ ಜನರ ಮುಂದೆ ಸತ್ಯ ಬಿಚ್ಚಿಡಬೇಕೆಂದರು.
ದೇಶದ್ರೋಹಿಗಳ ಹಿಂದಿರುವ ಸೂತ್ರದಾರಿಗಳು, ಪಾತ್ರದಾರಿಗಳು ಯಾರು ಎಂಬುದನ್ನು ಹೇಳಬೇಕು. ನಾಸಿರ್ ಹುಸೇನ್ ಹೆಸರನ್ನೇ ಕೈ ಬಿಟ್ಟಿದ್ದಾರೆ.
ನಾಸಿರ್ ಹುಸೇನ್ ನಾಲ್ಕನೇ ಆರೋಪಿಯನ್ನಾಗಿ ಮಾಡಬೇಕು ಎಂದ ಅವರು, ಬಿಜೆಪಿ ಇವತ್ತೆ ಉಪರಾಷ್ಟ್ರಪತಿಗಳಿಗೆ ಪತ್ರ ಬರೆಯಲಿದೆ ಎಂದರು. ಪೊಲೀಸರ ಮೇಲೆ ಸರ್ಕಾರ ಒತ್ತಡ ಹಾಕುತ್ತಿದೆ. ಪಾಕಿಸ್ತಾನ ಪರ ಯಾರೇ ಕೂಗಿದರೂ ಅವರು ದ್ರೋಹಿಗಳೇ. ಅಲ್ಲಿ ಜಾತಿ ಧರ್ಮ ಹಿಂದೂ ಮುಸ್ಲಿಂ ಎಂಬುದು ಬರುವುದಿಲ್ಲ ಎಂದು ಕಿಡಿಕಾರಿದರು.