ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಶನಿವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಖಾನ್, ತನ್ನ ಹತ್ಯೆಗೆ ಪಾಕಿಸ್ತಾನ ಸೇರಿದಂತೆ ವಿದೇಶಗಳಲ್ಲಿ ಸಂಚು ನಡೆದಿದೆ ಎಂದು ಆರೋಪಿಸಿದ್ದಾರೆ. ಕೊಲೆಗೆ ಯೋಜನೆ ರೂಪಿಸಿದ್ದು ಯಾರು ಎಂಬುದು ತನಗೆ ಗೊತ್ತಿತ್ತು ಮತ್ತು ನಾನು ವಿಡಿಯೋ ರೆಕಾರ್ಡ್ ಮಾಡಿದ್ದೇನೆ ಮತ್ತು ಅದರಲ್ಲಿ ಎಲ್ಲರ ಹೆಸರುಗಳನ್ನು ಉಲ್ಲೇಖಿಸಿದ್ದೇನೆ ಮತ್ತು ನನ್ನನ್ನು ಕೊಂದರೆ ಈ ವೀಡಿಯೊವನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನವನ್ನು ಕಳ್ಳರ ಕೈಗೆ ಕೊಡುವುದಕ್ಕಿಂತ ದೇಶದ ಮೇಲೆ ಅಣುಬಾಂಬ್ ಹಾಕುವುದು ಉತ್ತಮ ಎಂಬ ಮಾತನ್ನು ಹೇಳಿದ್ದಾರೆ.
ಹಳೆ ಆಡಳಿತದ ಭ್ರಷ್ಟಾಚಾರದ ಬಗ್ಗೆ ಕಥೆಗಳನ್ನು ಹೇಳುವ ಬದಲು ತಮ್ಮದೇ ಸರ್ಕಾರದ ಕಾರ್ಯಕ್ಷಮತೆಯತ್ತ ಗಮನ ಹರಿಸಬೇಕು ಎಂದು ಇಮ್ರಾನ್ ಸಲಹೆ ನೀಡಿದರು. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಕಳ್ಳರು ನ್ಯಾಯಾಂಗ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ನಾಶಪಡಿಸಿದ್ದಾರೆ ಎಂದರು. ಏನಾದರೂ ಸರಿಯೇ ಈ ತಿಂಗಳ 20 ರಂದು ಲಾಂಗ್ ಮಾರ್ಚ್ ರ್ಯಾಲಿ ರಾಜಧಾನಿಯನ್ನು ಪ್ರವೇಶಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಇಮ್ರಾನ್ ಎಚ್ಚರಿಕೆ ನೀಡಿದರು. ರ್ಯಾಲಿಯಲ್ಲಿ ಸುಮಾರು 20 ಲಕ್ಷ ಜನ ಪಾಲ್ಗೊಳ್ಳಲಿದ್ದು, ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ನಮ್ಮ ನಿರ್ಧಾರ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶ ರವಾನೆ ಮಾಡಿದರು.