ಕೊಡಗು ಮೂಲನಿವಾಸಿಗಳ ಸಾಂವಿಧಾನಿಕ ಹಕ್ಕು ಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಡಾ. ಸುಭಾಷ್ ನಾಣಯ್ಯ ಆಯ್ಕೆ

ದಿಗಂತ ವರದಿ ಮಡಿಕೇರಿ:

ಕೊಡಗು ಜಿಲ್ಲೆಯ ಮೂಲನಿವಾಸಿಗಳ ಹಕ್ಕುಗಳನ್ನು ಸಂರಕ್ಷಿಸಲು ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲು ‘ಕೊಡಗು ಮೂಲನಿವಾಸಿಗಳ ಸಾವಿಧಾನಿಕ ಹಕ್ಕು ಸಂರಕ್ಷಣಾ ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ.
ಈ ನೂತನ ಸಮಿತಿಯ ಅಧ್ಯಕ್ಷರಾಗಿ ಮೂರ್ನಾಡಿನ ಡಾ. ಮೇಚಿರ ಸುಭಾಷ್ ನಾಣಯ್ಯ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಗಿದೆ.
ಭಾನುವಾರ ಮಡಿಕೇರಿಯ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಭಾಂಗಣದಲ್ಲಿ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊಡಗು ಮೂಲನಿವಾಸಿ ವಿವಿಧ ಸಮುದಾಯದ ಪ್ರತಿನಿಧಿಗಳ ಮಹತ್ವದ ಸಭೆಯಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಉಪಾಧ್ಯಕ್ಷರುಗಳಾಗಿ ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಹಿರಿಯ ವಕೀಲ ಪಡಿಂಞಾರಂಡ ಜಿ. ಅಯ್ಯಪ್ಪ, ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಕೊಡಗು ಐರಿ ಸಮಾಜದ ಅಧ್ಯಕ್ಷೆ ಬಬ್ಬಿರ ಸರಸ್ವತಿ, ಸವಿತಾ ಸಮಾಜದ ವೇದಪಂಡ ಕಿರಣ್ ಅವರನ್ನು ಸಭೆ ಅವಿರೋಧವಾಗಿ ಆಯ್ಕೆಗೊಳಿಸಿತು. ಅಲ್ಲದೆ, ಕೊಡಗಿನ ಎಲ್ಲಾ ಮೂಲನಿವಾಸಿ ಸಮುದಾಯಗಳ ಪ್ರತಿನಿಧಿಗಳನ್ನು ಸಮಿತಿಗೆ ಆಯ್ಕೆಗೊಳಿಸಲು ನಿರ್ಧರಿಸಲಾಯಿತು.
ಕೂರ್ಗ್ ಬೈರೇಸ್ ವಿವಾದ ಸೇರಿದಂತೆ ಕೊಡಗಿನ ಮೂಲನಿವಾಸಿಗಳು ಕಳೆದ ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಲಾಯಿತು. ಅಲ್ಲದೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಈ ಕುರಿತು ಪರಿಹಾರ ಕಂಡುಕೊಳ್ಳಲು ಹಂತ ಹಂತವಾದ ಹೋರಾಟ ರೂಪಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಕೊಡಗು ಮೂಲನಿವಾಸಿ ವಿವಿಧ ಸಮುದಾಯದ ಪ್ರತಿನಿಧಿಗಳು, ಜನಾಂಗೀಯ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!