ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಬಿಹಾರದಲ್ಲಿ ಮೂರನೇ ದಿನವೂ ಪ್ರತಿಭಟನೆ ಮುಂದುವರೆದಿದ್ದು. ಕೆಲವೆಡೆ ಬಿಗಿ ಭದ್ರತೆಯ ನಡುವೆಯೂ ಹಿಂಸಾಚಾರಗಳು ವರದಿಯಾಗಿವೆ.
ಅಗ್ನಿಪಥ ಯೋಜನೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಬಿಹಾರ ಬಂದ್ ಗೆ ಕರೆ ನೀಡಲಾಗಿತ್ತು. ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜಕೀಯ ಪಕ್ಷಗಳಾದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ), ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ ಲೆನಿನಿಸ್ಟ್ (ಸಿಪಿಐ-ಎಂಎಲ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಐ-ಎಂ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ-ಸೆಕ್ಯುಲರ್ (HAM-S)ಗಳು ಪ್ರತಿಭಟನೆಗೆ ಬೆಂಬಲ ನೀಡಿವೆ.
ಕಳೆದ ಮೂರು ದಿನಗಳಲ್ಲಿ 60ಕ್ಕೂ ಹೆಚ್ಚು ರೈಲುಬೋಗಿಗಳಿಗೆ ಬೆಂಕಿ ಹಚ್ಚಲಾಗಿದ್ದು ಪೊಲೀಸರು 325 ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತರೇಗಾಣ ನಿಲ್ದಾಣದ ಹೊರಗೆ ನಿಲ್ಲಿಸಲಾಗಿದ್ದ ಹತ್ತಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಸ್ಟೇಷನ್ ಮಾಸ್ಟರ್ ಕ್ಯಾಬಿನ್ ಸೇರಿದಂತೆ ರೈಲ್ವೆ ಆವರಣಗಳು ಮತ್ತು ಇತರ ವಸ್ತುಗಳಿಗೆ ಬೆಂಕಿ ಹಚ್ಚಲಾಗಿದೆ. ತೆಹ್ತಾ ಪೊಲೀಸ್ ಔಟ್ಪೋಸ್ಟ್ ಬಳಿ ನಿಂತಿದ್ದ ಬಸ್ ಮತ್ತು ಟ್ರಕ್ಗೆ ಸೇನೆಯ ಆಕಾಂಕ್ಷಿಗಳು ಮತ್ತು ಬಂದ್ ಬೆಂಬಲಿಗರು ಬೆಂಕಿ ಹಚ್ಚಿದ್ದಾರೆ.
ಅರ್ವಾಲ್ನಲ್ಲಿ, ಪ್ರತಿಭಟನಾಕಾರರು ಆಂಬ್ಯುಲೆನ್ಸ್ ಮೇಲೆ ದಾಳಿ ಮಾಡಿದರು ಮತ್ತು ಅವರ ಚಾಲಕನನ್ನು ನಿರ್ದಯವಾಗಿ ಥಳಿಸಿದರು. ಮುಂಗೇರ್ನಲ್ಲಿ ಪ್ರತಿಭಟನಾಕಾರರು ತಾರಾಪುರ ಬ್ಲಾಕ್ ಅಭಿವೃದ್ಧಿ ಅಧಿಕಾರಿಯ (ಬಿಡಿಒ) ವಾಹನದ ಮೇಲೆ ದಾಳಿ ಮಾಡಿದರು ಮತ್ತು ತಾರಾಪುರ-ಸುಲ್ತಂಗಂಜ್ ರಸ್ತೆಯ ನಡುವೆ ಅದರ ವಿಂಡ್ಸ್ಕ್ರೀನ್ಗಳನ್ನು ಹಾನಿಗೊಳಿಸಿದರು ಎಂದು ಮೂಲಗಳು ವರದಿ ಮಾಡಿವೆ.
12 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಸಿವಾನ್, ಸಮಸ್ತಿಪುರ್, ಗೋಪಾಲ್ಗಂಜ್, ಕತಿಹಾರ್ ಇತ್ಯಾದಿಗಳಲ್ಲಿ ಸೆಕ್ಷನ್ 144 ವಿಧಿಸಲಾಗಿದೆ.
ಪೂರ್ವ ಕೇಂದ್ರ ರೈಲ್ವೇ ಶನಿವಾರ 319 ಪ್ಯಾಸೆಂಜರ್ ಮತ್ತು ಮೇಲ್/ಎಕ್ಸ್ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದೆ.