ಹೊಸದಿಗಂತ ವರದಿ, ಮಂಡ್ಯ:
ಜ್ಞಾನದೇಗುಲಗಳಲ್ಲಿ ಹಿಜಾಬ್ ಸಂಘರ್ಷ ಗುರುವಾರವೂ ಮುಂದುವರಿದಿದ್ದುಘಿ, ಕೆಲವು ಕಡೆಗಳಲ್ಲಿ ಆಡಳಿತ ಮಂಡಳಿಯ ಮನವೊಲಿಕೆಯಿಂದಾಗಿ ವಿದ್ಯಾರ್ಥಿನಿಯರು ಕೊಠಡಿಗೆ ತೆರಳಿ ಹಿಜಾಬ್ ತೆಗೆದು ತರಗತಿಗೆ ತೆರಳಿದರೆ, ಮತ್ತೆ ಕೆಲವು ಕಡೆಗಳಲ್ಲಿ ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗುವುದಾಗಿ ಪಟ್ಟು ಹಿಡಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಪಿಇಎಸ್ ಕಾಲೇಜಿನ ಆವರಣಕ್ಕೆ ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ಬಂದಿದ್ದರು. ಕಾಲೇಜು ಆಡಳಿತ ಮಂಡಳಿಯ ಸೂಚನೆ ಮೇರೆಗೆ ಕಾಲೇಜಿನ ಆವರಣದಲ್ಲಿ ಕೊಠಡಿಯೊಂದಕ್ಕೆ ತೆರಳಿದ ಕೆಲವರು ಹಿಜಾಬ್ ಹಾಗೂ ಹಾಗೂ ಬುರ್ಕಾ ತೆಗೆದು ತರಗತಿಗೆ ಹಾಜರಾದರು.
ಮುಸ್ಕಾನ್ ಖಾನ್ ಗೈರು :
ವಿವಾದದ ಹಿನ್ನೆಲೆಯಲ್ಲಿ ಸರ್ಕಾರ ಕಾಲೇಜಿಗೆ ರಜೆ ಘೋಷಿಸಿತ್ತು. ನಿನ್ನೆಯಿಂದ ಮತ್ತೆ ಕಾಲೇಜುಗಳು ಆರಂಭವಾಗಿದ್ದವು. ಆದರೆ ಎಚ್.ಡಿ. ಚೌಡಯ್ಯ ಅವರ ನಿಧನದಿಂದಾಗಿ ಪಿಇಎಸ್ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಇಂದು ಎಂದಿನಂತೆ ಕಾಲೇಜು ಆರಂಭವಾಯಿತಾದರೂ, ಮುಸ್ಕಾನ್ಖಾನ್ ಕಾಲೇಜಿಗೆ ಗೈರು ಹಾಜರಾದರು.
ಮುಸ್ಕಾನ್ಖಾನ್ ಅವರು ಇಂದು ಕಾಲೇಜಿಗೆ ಬರುತ್ತಾರೆಯೇ ಎಂಬ ಚರ್ಚೆ ಪ್ರಾರಂಭವಾಗಿತ್ತು. ಆದರೆ ಅವರ ಪೋಷಕರು ನ್ಯಾಯಾಲಯದ ಆದೇಶ ಬಂದ ನಂತರವಷ್ಟೇ ಮುಸ್ಕಾನ್ ಕಾಲೇಜಿಗೆ ಬರುತ್ತಾರೆ ಎಂದು ಸ್ಪಷ್ಟಪಡಿಸಿದರು.