ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ ಗುತ್ತಿಗೆದಾರ ಸಚಿನ್ ಕೇಸ್ ನ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದು, ಇಂದು ನೋಟಿಸ್ ನೀಡಿದ್ದ ಐವರು ಆರೋಪಿಗಳು ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಬಂಧಿಸಲಾಗಿದೆ.
ಗುತ್ತಿಗೆದಾರ ಸಚಿನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನವೇ ಡೆತ್ ನೋಟ್ ಬರೆದಿಟ್ಟಿದ್ದರು. ಆ ಡೆತ್ ನೋಟ್ ನಲ್ಲಿ ಎಂಟು ಮಂದಿಯ ಹೆಸರನ್ನು ಉಲ್ಲೇಖಿಸಲಾಗಿತ್ತು. ಈ ಹಿನ್ನಲೆಯಲ್ಲಿ ಜನವರಿ 6ರಂದು ತನಿಖಾ ತಂಡ ವಿಚಾರಣೆಗೆ ಹಾಜರಾಗುವಂತೆ ಐವರು ಆರೋಪಿಗಳಿಗೆ ನೋಟಿಸ್ ನೀಡಿದ್ದರು.
ಸಿಐಡಿ ನೋಟಿಸ್ ಹಿನ್ನಲೆಯಲ್ಲಿ ಇಂದು ಬೀದರ್ ನ ರೈಲ್ವೆ ಇಲಾಖೆಯ ಕಚೇರಿಯಲ್ಲಿನ ಸಿಐಡಿ ಅಧಿಕಾರಿಗಳ ಕಚೇರಿಗೆ ಹಾಜರಾಗಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರು, ಗೋರಕನಾಥ ಸಜ್ಜನ್, ನಂದಕುಮಾರ್ ನಾಗಬುಜಂಗಿ, ರಾಮನಗೌಡ ಪಾಟೀಲ್ ಹಾಗೂ ಸತೀಶ್ ಎಂಬುವರು ವಿಚಾರಣೆ ಎದುರಿಸಿದರು.
ಈ ಬಳಿಕ ಐವರು ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿರುವುದಾಗಿ ತಿಳಿದು ಬಂದಿದೆ. ಈ ಮೂಲಕ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸಲ್ಲಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದ 8 ಮಂದಿಯಲ್ಲಿ ಐವರನ್ನು ಸಿಐಡಿ ಬಂಧಿಸಿದೆ.