Friday, June 2, 2023

Latest Posts

ಸರ್ಕಾರದ ಜೊತೆ ಸಹಕರಿಸಿ,ಇಲ್ಲವಾದಲ್ಲಿ ಲಾಕ್‌ಡೌನ್ ಅನಿವಾರ್ಯ: ಸಚಿವ ಆರಗ ಜ್ಞಾನೇಂದ್ರ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಕೋವಿಡ್ ಎರಡನೇ ಅಲೆಯಲ್ಲಿ ಸಂಭವಿಸಿದಂತೆ ಮತ್ತೆ ಸಾವು ನೋವುಗಳು ಆಗಬಾರದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರ್ಕಾರದ ಜೊತೆಗೆ ಸಹಕಾರ ಮಾಡಬೇಕು. ಇಲ್ಲವಾದಲ್ಲಿ ಲಾಕ್‌ಡೌನ್ ಜಾರಿ ಮಾಡುವುದು ಅನಿವಾರ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ. ಈ ವಿಚಾರದಲ್ಲಿ ಎಲ್ಲರೂ ಯೋಚಿಸುವ ಅಗತ್ಯವಿದೆ. ಮಾಸ್ಕ್‌ಗಳಿಲ್ಲದೆ ತಿರುಗಾಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಮದುವೆ ಮತ್ತು ಇತರೆ ಸಮಾರಂಭಗಳಲ್ಲಿ ಸೇರುತ್ತಿದ್ದಾರೆ ಇದಕ್ಕೆ ಜನರೇ ಕಡಿವಾಣ ಹಾಕಿಕೊಳ್ಳಬೇಕು ಎಂದರು.
ಜನರ ಜೀವ ಉಳಿಸುವ ಸಲುವಾಗಿ ಆರ್ಥಿಕ ಅಭಿವೃದ್ಧಿಯನ್ನು ತ್ಯಾಗಮಾಡಬೇಕಾಗಿ ಬರುತ್ತದೆ. ಶಾಲಾ ಕಾಲೇಜುಗಳನ್ನು ಬಂದ್ ಮಾಡಬೇಕಾಗುತ್ತದೆ ಇದೆಲ್ಲದನ್ನೂ ತಪ್ಪಿಸಬೇಕು ಎನ್ನುವುದಾದರೆ ಸಾರ್ವಜನಿಕರು ಸಹಕಾರ ಮಾಡಬೇಕು ಎಂದರು.
ಸಧ್ಯಕ್ಕೆ ಲಾಕ್‌ಡೌನ್ ಆಲೋಚನೆ ಇಲ್ಲವಾದರೂ ತಜ್ಞರು ಸಭೆ ಸೇರಿ ಸಮಾಲೋಚನೆ ನಡೆಸುತ್ತಿದ್ದಾರೆ. ಬೆಂಗಳೂರೊಂದಲ್ಲೇ ನಿನ್ನೆ ಸೋಂಕಿತರ ಸಂಖ್ಯೆ ೯೦೦ರ ಗಡಿ ದಾಟಿದೆ. ಮುಂದೇನೆಂಬುದು ಗೊತ್ತಿಲ್ಲ ಎಂದರು.
ಸಧ್ಯಕ್ಕೆ ನೈಟ್ ಕರ್ಫ್ಯು ಮುಂದುವರಿಯಲಿದೆ. ಮುಖ್ಯಮಂತ್ರಿಗಳು ಸಹ ಇದನ್ನು ಹೇಳಿದ್ದಾರೆ. ಜನ ಜಾಗೃತಿ ಮೂಡಿಸುವುದು ಸಹ ಇದರ ಉದ್ದೇಶವಾಗಿದೆ ಎಂದರು.
ಕಾಂಗ್ರೆಸ್ ಪಾದಯಾತ್ರೆಗೆ ಅನುಮತಿ ಇಲ್ಲ ಎಂದು ಆ ಪಕ್ಷದ ಮುಖಂಡರು ಹೇಳಿದ್ದಾರೆ. ರಸ್ತೆಯಲ್ಲಿ ಸ್ವಲ್ಪ ಜನ ನಡೆದು ಹೋಗಲು ಅನುಮತಿ ಬೇಕಿಲ್ಲ. ಆದರೆ ಕೋವಿಡ್ ಕಾನೂನುಗಳನ್ನು ಮುಖಂಡರುಗಳು ಮುರಿಯಬಾರದು. ಈ ಹಿನ್ನೆಲೆಯಲ್ಲಿ ಅನುಮತಿ ಪಡೆಯುವುದು, ಬಿಡುವುದು ಬೇರೆ ಆದರೆ ನಿಬಂಧನೆಗಳನ್ನ ಎಲ್ಲರೂ ಸ್ವಯಂ ಅಳವಡಿಸಿಕೊಳ್ಳಬೇಕು ಎಂದರು.
ಚಿಕ್ಕಮಗಳೂರು ಜಿಲ್ಲೆ ಕೋವಿಡ್ ಲಸಿಕೆ ಹಾಕಿಸುವಲ್ಲಿ ಮೊದಲ ಡೋಸ್ ಶೇ.೯೭ ಹಾಗೂ ಎರಡನೇ ಡೋಸ್ ಶೇ.೮೧ ರಷ್ಟು ಸಾಧನೆ ಮಾಡಿದೆ. ರಾಜ್ಯದ ಸರಾಸರಿಗಿಂತ ಜಿಲ್ಲೆ ಮುಂದಿದೆ ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಕಾರ್ಯಕರ್ತೆಯರನ್ನ ಅಭಿನಂದಿಸುತ್ತೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!