ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿಗೆ ಫೋನ್ ನಲ್ಲಿ ಮಾತನಾಡುತ್ತಾ ನಿರಾತಂಕವಾಗಿ ಸೆಲ್ಯೂಟ್ ಹೊಡೆದ ಎಎಸ್ಪಿಯೊಬ್ಬರ ವರ್ಗಾವಣೆ ಪ್ರಕರಣ ಉತ್ತರಾಖಂಡ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ರಾಜ್ಯದ ಕೋಟ್ ದ್ವಾರ ದುರಂತ ಪ್ರದೇಶಗಳಿಗೆ ಭೇಟಿ ನೀಡಲು ಸಿಎಂ ಪುಷ್ಕರ್ ಸಿಂಗ್ ಧಾಮಿ ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದರು. ಸಿಎಂ ತಮ್ಮ ಹೆಲಿಕಾಪ್ಟರ್ನಿಂದ ಕೆಳಗಿಳಿಯುತ್ತಿದ್ದಂತೆ, ಕೋಟ್ದ್ವಾರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಶೇಖರ್ ಸುಯಲ್ ಅವರು ಫೋನ್ನಲ್ಲಿ ಮಾತನಾಡುತ್ತಲೇ ಸಿಎಂಗೆ ಸೆಲ್ಯೂಟ್ ಹೊಡೆದರು. ಆಗಸ್ಟ್ 11ರಂದು ನಡೆದ ಘಟನೆಯ ವಿಡಿಯೋ ತುಣುಕು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡಿದ ಬಳಿಕ ಹಿರಿಯ ಅಧಿಕಾರಿಗಳು ಎಎಸ್ಪಿ ವಿರುದ್ಧ ಕ್ರಮ ಕೈಗೊಂಡಿದ್ದು, ಸಿಎಂ ಕಾರ್ಯಕ್ರಮದಲ್ಲಿ ತುಂಬಾ ನಿಷ್ಕಾಳಜಿ ವಹಿಸಿದ್ದಾರೆ ಎಂದು ಎಎಸ್ಪಿ ಶೇಖರ್ ಸುಯಾಲ್ ಅವರನ್ನು ನರೇಂದ್ರನಗರದ ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.
ಸಿಎಂ ಆಗಮನದ ಸುದ್ದಿ ತಿಳಿದ ಸ್ಥಳೀಯ ಅಧಿಕಾರಿಗಳು ಹೆಲಿಪ್ಯಾಡ್ಗೆ ಆಗಮಿಸಿ ಸ್ವಾಗತಿಸಲು ಧಾವಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿ ಒಂದು ಕೈಯಲ್ಲಿ ಫೋನ್ ಮಾತಾಡುತ್ತಾ, ಇನ್ನೊಂದು ಕೈಯಿಂದ ಮುಖ್ಯಮಂತ್ರಿಗೆ ಸೆಲ್ಯೂಟ್ ಹೊಡೆದರು. ಶೇಖರ್ ತೆರವಾದ ಸ್ಥಾನಕ್ಕೆ ಜೈ ಬಲುನಿ ಅವರನ್ನು ಕೋಟ್ದ್ವಾರದ ಹೊಸ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜಿಸಲಾಗಿದೆ.