ಹೊಸದಿಗಂತ ವರದಿ, ಮಡಿಕೇರಿ:
ಕೋವಿಡ್ ನಿಯಮ ಪಾಲಿಸದ ರೆಸಾರ್ಟ್ ಸೀಲ್ಡೌನ್ ಮಾಡುವಲ್ಲಿ ಜಿಲ್ಲಾಡಳಿತ ಕೊನೆಗೂ ಯಶಸ್ವಿಯಾಗಿದೆ.
ಮಡಿಕೇರಿ ಹೊರವಲಯದ ಮೇಕೇರಿಯಲ್ಲಿರುವ ರೆಸಾರ್ಟ್’ನ 30ಕ್ಕೂ ಅಧಿಕ ಸಿಬ್ಬಂದಿಗೆ ಶನಿವಾರ ಸೋಂಕು ದೃಢವಾಗಿತ್ತು.ಆದರೂ ರೆಸಾರ್ಟ್ ಸೀಲ್ ಡೌನ್ ಮಾಡದೆ ಕಾರ್ಯಾಚರಿಸುತ್ತಿತ್ತು.
ಭಾನುವಾರವೂ ರೆಸಾರ್ಟ್’ನ 7ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರೂ, ರೆಸಾರ್ಟ್ ಮಾತ್ರ ಪ್ರವಾಸಿಗರಿಂದ ತುಂಬಿ ಹೋಗಿತ್ತು.
ರೆಸಾರ್ಟ್’ಗೆ ಭೇಟಿ ಶನಿವಾರ ಭೇಟಿ ನೀಡಿದ್ದ ಜಿಲ್ಲಾ ಆರೋಗ್ಯಾಧಿಕಾರಿಗಳು ರೆಸಾರ್ಟ್ ಸೀಲ್ ಡೌನ್ ಮಾಡುವುದಾಗಿ ಹೇಳಿದ್ದರಾದರೂ, ಸ್ಥಳ ಪರಿಶೀಲಿಸಿದ ತಾಲೂಕು ದಂಡಾಧಿಕಾರಿ ಮಹೇಶ್ ಅವರು ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಿದ ಸ್ಥಳವನ್ನಷ್ಟೇ ವೀಕ್ಷಿಸಿ ವಾಪಾಸಾಗಿದ್ದರು.
ಈ ಕುರಿತು ‘ಹೊಸದಿಗಂತ’ ಸೇರಿದಂತೆ ಕೆಲವು ಮಾಧ್ಯಮಗಳು ವರದಿ ಪ್ರಕಟಿಸುವ ಮೂಲಕ ಜಿಲ್ಲಾಡಳಿತದ ಗಮನಸೆಳೆದಿತ್ತು.
ಇತ್ತ ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿರಲಿಲ್ಲ.ರೆಸಾರ್ಟ್ ಸೀಲ್ ಡೌನ್ ಆಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿಕೆ ನೀಡುವುದರೊಂದಿಗೆ,ಖಾತರಿಪಡಿಸಿಕೊಳ್ಳಲು ತಾಲೂಕು ಆರೋಗ್ಯಾಧಿಕಾರಿಯವರನ್ನು ಸಂಪರ್ಕಿಸುವಂತೆ ಬೊಟ್ಟು ಮಾಡಿದರು. ಅತ್ತ ತಾಲೂಕು ಅಧಿಕಾರಿಯನ್ನು ಸಂಪರ್ಕಿಸಿದರೆ, ಸೀಲ್ ಡೌನ್ ಮಾಡುವುದು ತಹಶೀಲ್ದಾರರ ಹೊಣೆ ಅವರನ್ಮೇ ವಿಚಾರಿಸಿ ಎಂಬ ಉತ್ತರ ಕೇಳಿ ಬಂದಿತು.
ಕೊನೆಗೂ ವಿಷಯದ ಗಂಭೀರತರಯ ಬಗ್ಗೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ, ರೆಸಾರ್ಟ್ ಸೀಲ್ ಡೌನ್ ಮಾಡಿ ಎಲ್ಲರನ್ನೂ ಖಾಲಿ ಮಾಡಿಸುತ್ತಿದ್ದೇವೆ ಎಂಬ ಸ್ಪಷ್ಟನೆ ದೊರಕಿದೆ.
ಕೊರೋನಾ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದನ್ನು ಬಿಟ್ಟು ಇನ್ನಾದರೂ ಗಂಭೀರವಾಗಿ ಪರಿಗಣಿಸಲಿ ಎಂಬುದು ‘ಹೊಸದಿಗಂತ’ದ ಆಶಯ.