ಹೊಸದಿಗಂತ ವರದಿ ಮಡಿಕೇರಿ:
ಕೊರೋನಾ ವಾರಿಯರ್ ಎಂಬ ಹಣೆಪಟ್ಟಿ ಹೊತ್ತಿದ್ದ, ಜಿಲ್ಲಾಸ್ಪತ್ರೆಯ ಸಿಬ್ಬಂದಿಯೊಬ್ಬ ಶವಾಗಾರವನ್ನೇ ತನ್ನ ಕಾಮದಾಟಕ್ಕೆ ಬಳಸಿಕೊಂಡ ಆರೋಪ ಕೇಳಿಬಂದಿದ್ದು, ಇದೀಗ ಆತನ ವಿರುದ್ಧ ಹಿಂದೂ ಸಂಘಟನೆಗಳು ನೀಡಿರುವ ದೂರಿನನ್ವಯ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದರ ನಡುವೆಯೇ ಆರೋಪಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಆತನ ಮೇಲಿನ ಆರೋಪಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಜವಾನನಾಗಿದ್ದ ಸಯ್ಯದ್ ಎಂಬಾತನೇ ಆರೋಪಿಯಾಗಿದ್ದು, ಈತ ಹೆಣ್ಣುಮಕ್ಕಳ ಮೃತದೇಹದ ಬೆತ್ತಲೆ ಫೋಟೋಗಳನ್ನು ತನ್ನ ಮೊಬೈಲ್ನಲ್ಲಿ ತೆಗೆದಿಟ್ಟುಕೊಂಡಿದ್ದಲ್ಲದೆ, ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳನ್ನು ಶವಾಗಾರಕ್ಕೆ ಕರೆಸಿ ಅವರನ್ನು ದೈಹಿಕವಾಗಿ ಬಳಸಿಕೊಂಡಿರುವುದಾಗಿ ದೂರು ದಾಖಲಾಗಿದೆ.
ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ ಸೈಯ್ಯದ್ ಕೋವಿಡ್ ಆರಂಭದ ದಿನದಿಂದಲೂ ಕೂಡಾ ಕೊರೋನಾ ವಾರಿಯರ್ ಎನ್ನುವ ಹಣೆಪಟ್ಟಿಯನ್ನು ಹೊತ್ತುಕೊಂಡಿದ್ದರ ಪರಿಣಾಮ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳ ಅನುಕಂಪಕ್ಕೆ ಪಾತ್ರನಾಗಿದ್ದನೆನ್ನಲಾಗಿದೆ. ಅಲ್ಲದೆ ಕೆಲವು ಹೆಣ್ಣು ಮಕ್ಕಳ ಜೊತೆಗಿನ ಸಲುಗೆಯನ್ನು ಬಳಸಿ ತನ್ನ ಕಾಮತೃಷೆ ತೀರಿಸಲು ಆರಂಭಿಸಿದ್ದನೆಂದು ಹೇಳಲಾಗಿದೆ.
ಶವಾಗಾರ ಜವಾನನಾಗಿದ್ದುಕೊಂಡು ಶವಾಗಾರಕ್ಕೆ ಬರುವ ಸಾಕಷ್ಟು ಹೆಣ್ಣು ಮಕ್ಕಳ ಮೃತದೇಹದ ಪೋಟೋಗಳನ್ನು ತನ್ನ ಮೊಬೈಲ್’ನಲ್ಲಿ ಗೌಪ್ಯವಾಗಿ ಇಟ್ಟುಕೊಂಡಿರುವುದಲ್ಲದೆ, ಕೋವಿಡ್ ಸಮಯದಲ್ಲಿ ಶವಾಗಾರದಲ್ಲೇ ಅವಕಾಶ ಸಿಕ್ಕಿದ್ದನ್ನು ಬಳಸಿಕೊಂಡ ಈತ ಆಸ್ಪತ್ರೆಯ ಅದೆಷ್ಟೋ ಹೆಣ್ಣು ಮಕ್ಕಳನ್ನು ಬ್ಲಾಕ್ ಮೇಲ್ ಮಾಡಿ ಶವಾಗಾರಕ್ಕೆ ಕರೆಸಿ ಅವರ ಜೊತೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದಾಖಲೆ ಇರುವುದಾಗಿ ಹಿಂದೂ ಸಂಘಟನೆ ಪ್ರಮುಖರು ತಿಳಿಸಿದ್ದಾರೆ.
ಈತನ ಕೃತ್ಯದ ಬಗ್ಗೆ ಸಂಘಟನೆಯ ಪ್ರಮುಖರು ಜಿಲ್ಲಾಸ್ಪತ್ರೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡಾ ತಕ್ಷಣ ಕ್ರಮ ಕೈಗೊಳ್ಳದೇ ಇದೀಗ ಹಿಂದೂ ಸಂಘಟನೆಯ ದೂರಿನನ್ವಯವೇ ಮಾಹಿತಿಯನ್ನು ನಗರ ಠಾಣೆಗೆ ರವಾನಿಸಿದ್ದಾರೆ. ಈತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಶವವನ್ನೇ ಕಾಮದ ದೃಷ್ಟಿಯಿಂದ ನೋಡುತ್ತಿದ್ದ ಸೈಯದ್ನ ಮೋಸದ ಬಲೆಗೆ ಬಿದ್ದವರಲ್ಲಿ ಅತಿಹೆಚ್ಚು ಮಂದಿ ವಿವಾಹಿತ ಹೆಣ್ಣುಮಕ್ಕಳೇ ಎನ್ನುವುದು ಆಘಾತಕಾರಿಯಾಗಿದೆ. ಈತನ ಜೊತೆ ಒಂದು ತಂಡವೇ ಇದ್ದು, ಮಿಕ್ಕವರಿಗೂ ಕೂಡಾ ಕಾನೂನಿನ ಮೂಲಕ ಶಿಕ್ಷೆಯಾಗಲಿ ಎನ್ನುವುದು ಹಿಂದೂ ಸಂಘಟನೆಗಳ ಪ್ರಮುಖರ ಒತ್ತಾಯವಾಗಿದೆ.
ಸಾಕಷ್ಟು ಹೆಣ್ಣುಮಕ್ಕಳನ್ನು ತನ್ನ ಲೈಂಗಿಕ ತೃಷೆಗೆ ಬಳಸಿ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂಬ ವಿಚಾರ ಆತನ ಮೊಬೈಲ್ನಲ್ಲಿರುವ ಆಡಿಯೋ ಸಂಭಾಷಣೆಯಲ್ಲಿದೆ ಎಂದೂ ಹಿಂದೂ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಡುವೆಯೇ ಸಯ್ಯದ್ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಕೂಡಾ ತನಿಖೆಗೆ ಪೊಲೀಸರಿಗೆ ಮನವಿ ಮಾಡಿರುವುದಾಗಿ ವೈದ್ಯಕೀಯ ಕಾಲೇಜು ಡೀನ್ ಡಾ. ಕಾರ್ಯಪ್ಪ ಸ್ಪಷ್ಟಪಡಿಸಿದ್ದಾರೆ.