Saturday, September 23, 2023

Latest Posts

ಕೊರೋನಾ,ಒಮಿಕ್ರಾನ್ ಹರಡುವಿಕೆ ಭೀತಿ: ಇತಿಹಾಸ ಪ್ರಸಿದ್ಧ ಸುತ್ತೂರು ಶ್ರೀ ಶಿವರಾತ್ರೀಶ್ವರ ಜಾತ್ರೆ ರದ್ದು

ಹೊಸದಿಗಂತ ವರದಿ,ಮೈಸೂರು:

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕು ಸುತ್ತೂರು ಶ್ರೀಕ್ಷೇತ್ರದಲ್ಲಿ ಜನವರಿ ೨೮ ಶುಕ್ರವಾರದಿಂದ ಫೆಬ್ರವರಿ ೨ ಬುಧವಾರದವರೆಗೆ ನಡೆಬೇಕಾಗಿದ್ದ ಇತಿಹಾಸ ಪ್ರಸಿದ್ಧ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವನ್ನು ಕೊರೋನಾ ಹಾಗೂ ಅದರ ರೂಪಾಂತರಿ ಒಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ರದ್ದುಪಡಿಸಲಾಗಿದೆ.
ಕೋವಿಡ್ ಹಾಗೂ ಅದರ ರೂಪಾಂತರಿ ಓಮಿಕ್ರಾನ್ ವೈರಾಣು ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಸರ್ಕಾರ ರಾತ್ರಿ ವೇಳೆ ಹಾಗೂ ವಾರಾಂತ್ಯಗಳಲ್ಲಿ ಕರ್ಫ್ಯೂ ಘೋಷಿಸಿದೆ. ಸೋಂಕು ಮತ್ತಷ್ಟು ಉಲ್ಬಣಿಸಿದರೆ, ಕಾನೂನಿನ ಕಟ್ಟುಪಾಡುಗಳು ಮತ್ತಷ್ಟು ಕಠಿಣಗೊಳ್ಳಲಿವೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಬಾರಿಯ ಜಾತ್ರೆಯನ್ನು ಪೂರ್ಣವಾಗಿ ರದ್ದುಪಡಿಸಲಾಗಿದೆ. ರಥೋತ್ಸವ, ತೆಪ್ಪೋತ್ಸವ, ಸಾಮೂಹಿಕ ವಿವಾಹ, ವಸ್ತುಪ್ರದರ್ಶನ, ಕೃಷಿಮೇಳ, ಕುಸ್ತಿ ಪಂದ್ಯಾವಳಿ, ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಅಂಗಡಿ ಮುಂಗಟ್ಟುಗಳು – ಇತ್ಯಾದಿ ಯಾವುವೂ ಇರುವುದಿಲ್ಲ. ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳನ್ನು ಸಾಂಕೇತಿಕವಾಗಿ ಒಂದೇ ದಿವಸಕ್ಕೆ ಸೀಮಿತಗೊಳಿಸಿ ಆಚರಿಸಲಾಗುತ್ತದೆ.
ಈ ಕಾರಣಗಳಿಂದಾಗಿ ಸೇವಾರ್ಥದಾರರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಯಾರಿಗೂ ಶ್ರೀಕ್ಷೇತ್ರಕ್ಕೆ ಪ್ರವೇಶವಿರುವುದಿಲ್ಲ. ಎಲ್ಲರೂ ಈ ವಿಷಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಶ್ರೀಕ್ಷೇತ್ರಕ್ಕೆ ಆಗಮಿಸದೆ ಸಹಕರಿಸಬೇಕಾಗಿ ಸುತ್ತೂರು ಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!