ಹೊಸದಿಗಂತ ವರದಿ,ಹಾವೇರಿ:
ನಾವು ಗೆದ್ದಿದ್ದೇವೆ. ಗೆದ್ದದ್ದೇವೆ ಎಂದು ಬೀಗುವುದಿಲ್ಲ. ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿದ ಪರಿಣಾಮ ನಮಗೆ ಜನತೆ ಅಭೂತಪೂರ್ವ ಗೆಲುವನ್ನು ಆಶೀರ್ವದಿಸಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತವನ್ನು ಕಾಂಗ್ರೆಸ್ ಸರ್ಕಾರ ನೀಡಲಿದೆ ಎಂದು ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ, ವಿಪ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಭ್ರಚಾರ ರಹಿತ ಆಡಳಿತ ನೀಡುತ್ತೇವೆ ಎಂಬ ಭರವಸೆಯನ್ನು ಜನತೆಗೆ ನೀಡಿದ್ದೆವು ಅದರಂತೆ ಆಡಳಿತವನ್ನು ನೀಡುತ್ತೇವೆ ಎಂದರು.
ಎಲ್ಲ ವರ್ಗದ ಹಾಗೂ ಎಲ್ಲ ಸಮುದಾಯದವರಿಗಾಗಿ ಯೋಜನೆಗಳನ್ನು ಸರ್ಕಾರ ರೂಪಿಸಿ ಎಲ್ಲರಿಗೂ ಪ್ರಯೋಜನ ದೊರೆಯುವಂತೆ ಮಾಡಲಿದೆ. ಜನತೆಗೆ ವಾಗ್ದಾನ ಮಾಡಿದಂತೆ ಎಲ್ಲ ಯೋಜನೆಗಳನ್ನು ಜಾರಿಗೆತರುತ್ತೇವೆ. ಕಳೆದ ಬಾರಿ ಅಧಿಕಾರದಲಿದ್ದಾಗ ಘೋಷಣೆ ಮಾಡಿದ ಎಲ್ಲ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ತನ್ನ ನಿಷ್ಠೆಯನ್ನು ಸಾಬೀತುಪಡಿಸಿತ್ತು. ಈ ಬಾರಿಯೂ ಜನತೆ ಕಾಂಗ್ರೆಸ್ ಸರ್ಕಾರದ ಮೇಲೆ ಭರವಸೆ ಇಟ್ಟಿದ್ದಾರೆ. ಆದರೆ ಬಿಜೆಪಿ ಸರ್ಕಾರ ಘೋಷಿಸಿದ ಭರವಸೆಗಳಲ್ಲಿ ಶೇ.೧೦ರಷ್ಟನ್ನು ಜಾರಿಗೆ ತರಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಜಿಪಂ, ತಾಪಂ ಚುನಾವಣೆಗಳಿಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಈ ಕುರಿತು ಹೈಕೋರ್ಟ್ದಲ್ಲಿ ಪ್ರಕರ ಇರುವುದರಿಂದ ಪಕ್ಷ ತಾಳ್ಮೆಯಿಂದ ಕಾಯುತ್ತಿದೆ. ೨೦೨೪ರ ಲೋಕಸಭಾ ಚುಣಾವಣೆಯಲ್ಲಿ ಪಕ್ಷ ೨೦ ಸ್ಥಾನಗಳನ್ನು ಗೆಲ್ಲಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಬೆಲೆ ಏರಿಕೆ ತಡೆಯುವಲ್ಲಿನ ವೈಫಲ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಮನೆ ಹಾಗೂ ನಿವೇಶನ ಹಂಚಿಕೆಯಲ್ಲಿನ ಸೇರಿದಂತೆ ಎಲ್ಲ ಭ್ರಷ್ಟಾಚಾರ ಕುರಿತು ತನಿಖೆ ಮಾಡಲಾಗುವುದು ಎಂದು ಇಗಾಗಲೇ ಸಿಎಂ ಅವರು ಮಾತನಾಡಿದ್ದಾರೆ. ಇಂದಿರಾ ಕ್ಯಾಂಟೀನ್ಗಳನ್ನು ಮತ್ತೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಐದು ಜನ ಶಾಸಕರು ಹಾಗೂ ಪಕ್ಷದಲ್ಲಿ ನೀವು ಪ್ರಭಾವಿಗಳಿದ್ದರೂ ಒಬ್ಬರಿಗೂ ಸಚಿವ ಸ್ಥಾನ ದೊರೆತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಜಿಲ್ಲೆಗೆ ಸಚಿವ ಸ್ಥಾನ ದೊರೆಯದೇ ಅನ್ಯಾಯವಾಗಿದೆ ಎನ್ನುವುದು ಸುಳ್ಳಲ್ಲ ಇದನ್ನು ಬರುವ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
೨೦೨೪ರ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿವೇ ಎಂಬ ವದ್ದಂತಿಗಳು ಕೇಳಿಬರುತ್ತಿವೆಯಲ್ಲ. ನಾನು ಈ ಕುರಿತು ಏನನ್ನು ಹೇಳುವುದಿಲ್ಲ ಈ ಕುರಿತು ಪಕ್ಷದ ವರಿಷ್ಠರು ತೀರ್ಮಾನ ತಗೆದುಕೊಳ್ಳುತ್ತಾರೆ. ಈ ಕುರಿತು ಹಲವು ರೀತಿಯ ಪ್ರಶ್ನೆಗಳಿಗೆ ನನ್ನ ಬಗ್ಗೆ ನಾನೇ ಹೇಳಿಕೊಳ್ಳುವುದು ಸಾಧುವಲ್ಲ ಎಂದು ಪ್ರತಿಕ್ರೀಯಿಸಿದರು.
ಖಾಲಿ ಇರುವ ಮೂರು ವಿಧಾನಪರಿಷತ್ ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಟ್ಟಿದಲ್ಲಿ ಚರ್ಚೆಗಳು ನಡೆಯುತ್ತಿವೆ ಆದಷ್ಟು ಬೇಗ ಈ ಕುರಿತು ಅಂತಿಮ ತೀರ್ಮಾನ ತಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಾಗೂ ಶಿವಕುಮಾರ ತಾವರಗಿ ಇದ್ದರು.