ದಿಗಂತ ವರದಿ ವಿಜಯಪುರ:
ಭ್ರಷ್ಟಾಚಾರ ಯಾರೇ ಮಾಡಿದ್ದರು ಅದು ತಪ್ಪು. ಬಿಜೆಪಿ ಶಾಸಕನ ಪುತ್ರನೆಂದೂ ಬಿಡದೇ, ಆರೋಪಿಯನ್ನು ಬಂಧಿಸಿ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಬಿಜೆಪಿ ಯತ್ನಿಸುತ್ತಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ, ಬಿಜೆಪಿ ಶಾಸಕ ವಿರೂಪಾಕ್ಷ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕ ಲಂಚ ಪ್ರಕರಣದ ಕುರಿತು ಮಾತನಾಡಿದ ಅವರು, ಇಂದು ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದು ಬಿಜೆಪಿ ಶಾಸಕರ ಪುತ್ರ. ಹೀಗಾಗಿ ಲೋಕಾಯುಕ್ತವನ್ನು ಬಲಪಡಿಸುವ ನಿಟ್ಟಿನಲ್ಲಿ ಪಕ್ಷ ಶ್ರಮಿಸುತ್ತಿದೆ ಎಂದರು.
ಲೋಕಾಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದು ಬಿಜೆಪಿಯವರು. ಆದರೆ ಲೋಕಾಯುಕ್ತವನ್ನು ಕತ್ತು ಹಿಸುಕಿ ಸಾಯಿಸಿದ್ದು ಕಾಂಗ್ರೆಸನವರು. ಯಾರನ್ನು ರಕ್ಷಿಸಲು ಲೋಕಾಯುಕ್ತ ಮುಚ್ಚಿ ಎಸಿಬಿ ತೆರೆದಿರಿ ? ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರದ ವೇಳೆ ಜಯಮಾಲಾ ವಿಚಾರ ಹೊರಬಂತು ಏನಾಯಿತು ?. ಆಂಜನೇಯ ಮನೆಯಲ್ಲಿ ಹಣ ಸಿಕ್ಕಿತು ಏನಾಯಿತು?. ನೀವು ತಿಂದಿದ್ದು ಬದನೇಕಾಯಿ ವೇದ ಹೇಳೋದಕ್ಕೆ ಹೋಗಬೇಡಿ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ಶೇ. 40 ರಷ್ಟು ಕಮೀಷನ್ ಸರ್ಕಾರ ಎಂದು ಆರೋಪ ಮಾಡುವವರು ನಿಮ್ಮ ಬಳಿ ಸಾಕ್ಷಿ ಇದ್ದರೆ ದೂರು ಕೊಡಿ. ಹ್ಯಾರಿಸ್, ಜಾರ್ಜ್, ಪ್ರಿಯಾಂಕ ಖರ್ಗೆ ಬಡವರಾಗಿದ್ದಾರಾ ?. ಈ ಹಿಂದೆ ಹೇಗಿದ್ದರು ಈಗ ಹೇಗಿದ್ದಾರೆ ? ಎಂದು ಪ್ರಶ್ನಿಸಿದರು.
ರಮೇಶಕುಮಾರ ಅವರೇ ಮೂರು ಮೂರು ತಲೆಮಾರಿಗೆ ಕೂತು ತಿನ್ನುವಷ್ಟು ಮಾಡಿಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ ಎಂದರು.
ಕೆಡಬ್ಲುಎಸ್ ಎಚ್.ಡಿ. ಅಧಿಕಾರಿ ಆಗಿದ್ದು ಸಿಕ್ಕಿರುವ ಹಣ ಅವನ ವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹಣ ಸಿಕ್ಕಿರೋದಾ ? ಇಲ್ಲಾ ಅವರ ತಂದೆಯ ವಿಚಾರದಲ್ಲಿ ಸಿಕ್ಕಿರೋದಾ? ಎಂಬುದು ತನಿಖೆ ಆಗಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ಸುರೇಶ ಬಿರಾದಾರ, ಮುಖಂಡರಾದ ದಯಾಸಾಗರ ಪಾಟೀಲ, ಶಿವರುದ್ರ ಬಾಗಲಕೋಟ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.