ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಚರ್ಚಿತ ಗ್ಯಾನವಾಪಿ ಮಸೀದಿಯ ವಿವಾದದ ಕುರಿತು ವಾರಣಾಸಿ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು ಮಸೀದಿಯ ಸಂಪೂರ್ಣ ಸರ್ವೇಕ್ಷಣೆ ನಡೆಸುವಂತೆ ಆದೇಶಿಸಿದೆ.
ಈ ಹಿಂದೆ ಮಸೀದಿಯ ಒಳಗಡೆ ಸರ್ವೇ ಮಾಡಲು ಬಿಡುವುದಿಲ್ಲ ಎಂದು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಮಸೀದಿಯ ಆಡಳಿತ ಮಂಡಳಿ ಸರ್ವೆ ನಡೆಸಲು ಬಿಟ್ಟಿರಲಿಲ್ಲ. ಈ ಕುರಿತು ಮಸೀದಿಯಲ್ಲಿಸರ್ವೇಕ್ಷಣೆ ಮಾಡಬಹುದೇ ಎಂದು ವಾರಣಾಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಲಯವು ನೆಲಮಾಳಿಗೆ ಸೇರಿದಂತೆ ಇಡೀ ಪ್ರದೇಶವನ್ನು ಸರ್ವೆ ಮಾಡಿ ವೀಡಿಯೊಗ್ರಾಫ್ ಮಾಡುವಂತೆ ಆದೇಶ ನೀಡಿದ್ದು ಎರಡನೇ ನ್ಯಾಯಾಲಯದ ಕಮೀಷನರ್ ವಿಶಾಲ್ ಕುಮಾರ್ ಹಾಗೂ ಅಜಯ್ ಮಿಶ್ರಾ ಅವರ ಸಮಿತಿಯೊಂದನ್ನು ರಚಿಸಿದೆ.
ಸಂಪೂರ್ಣ ಮಸೀದಿಯ ಸರ್ವೇಕ್ಷಣೆ ನಡೆಸಿ ಮೇ.17ರ ಒಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯವು ಆದೇಶ ನೀಡಿದೆ.