ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಮತ್ತೆ ಮಹಾಮಾರಿ ಕೊರೊನಾ ಆತಂಕ ಮನೆ ಮಾಡಿದ್ದು, ರಾಜ್ಯದ ಜನರು ಆತಂಕದಲ್ಲಿದ್ದಾರೆ. ಕೊರೊನಾ ರೂಪಾಂತರ ತಳಿ ಬಿಎಫ್.7 ಸೋಂಕು ಪತ್ತೆಯಾದ ರೋಗಿಗಳಿಗೆ ರಾಜ್ಯದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅಶೋಕ್, ಕೊರೊನಾ ರೂಪಾಂತರ ತಳಿ ಬಿಎಫ್.7 ಸೋಂಕು ಪತ್ತೆ ಹಿನ್ನೆಲೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಹೊಸ ಮಾರ್ಗಸೂಚಿ ಜಾರಿಗೆ ತರಲಾಗಿದೆ ಎಂದು ಸಚಿವ ಅಶೋಕ್ ಹೇಳಿದ್ದಾರೆ.
ಬಿಎಫ್.7 ಸೋಂಕು ಪತ್ತೆಯಾದ ರೋಗಿಗಳನ್ನು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕು ಪತ್ತೆಯಾದ ರೋಗಿಗಳಿಗೆ ರಾಜ್ಯದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಸಚಿವ ಆರ್. ಅಶೋಕ ಹೇಳಿದ್ದಾರೆ.
ಚೀನಾದಲ್ಲಿ ಕೋವಿಡ್ ನ ರೂಪಾಂತರ ತಳಿಯ ಹಾವಳಿ ಹೆಚ್ಚಾಗಿದ್ದು, ಈ ಹಿನ್ನಲೆ ರಾಜ್ಯದಲ್ಲಿ ಕೂಡ ಅನೇಕ ಮಾರ್ಗಸೂಚಿಗಳನ್ನು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಈ ನಿಟ್ಟಿನಲ್ಲಿ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಮಾತನಾಡಿ ಸಚಿವ ಅಶೋಕ್ , ಮಾಸ್ಕ್ ಹಾಕಿಕೊಂಡು ಬಾರ್ ಪಬ್ ಗಳಲ್ಲಿ ಪ್ರವೇಶ ನೀಡುವುದಕ್ಕೆ ಸಂಬಂಧಪಟ್ಟಂತೆ ಮಾಲೀಕರಿಂದ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಬಾರ್, ಪಬ್ ಗಳಲ್ಲಿ ಕುಳಿತು ಡ್ರಿಂಕ್ಸ್ ಮಾಡಲು ಸ್ಪೆಷಲ್ ಮಾಸ್ಕ್ ಇದ್ದು, ಅವುಗಳನ್ನು ಹಾಕಿಕೊಂಡು ಕುಡಿಯಬಹುದಾಗಿದೆ ಅಂತ ಹೇಳಿದರು, ಇದರಿಂದ ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಅಂತ ತಿಳಿಸಿದರು.