ಗ್ರಾಮೀಣರ ಬದುಕು ಹೈರಾಣಾಗಿಸಿದ್ದ ಪುಂಡಾನೆ ಸೆರೆ!

ಹೊಸ ದಿಗಂತ ವರದಿ, ಮಡಿಕೇರಿ:

ವ್ಯಾಪಕ ಕೃಷಿ ಹಾನಿಗೆ ಕಾರಣವಾಗಿ ಗ್ರಾಮೀಣರ ಬದುಕನ್ನು ಹೈರಾಣಾಗಿಸಿದ್ದ ಪುಂಡಾನೆಯೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆಯ ತಂಡ ನಡೆಸಿದ ವ್ಯಾಪಕ ಕಾರ್ಯಾಚರಣೆ ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ಪುಂಡಾನೆಯ ಸೆರೆಯೊಂದಿಗೆ ಮುಕ್ತಾಯವಾಗಿದ್ದು, ಸೆರೆಯಾಗಿರುವ ಕಾಡಾನೆ ಅಂದಾಜು 22 ವರ್ಷದ್ದೆಂದು ಅಂದಾಜಿಸಲಾಗಿದೆ.

ತೀವ್ರ ಕಾರ್ಯಾಚರಣೆ
ಕರಡಿಗೋಡು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಇರುವುದನ್ನು ಅರಣ್ಯ ಇಲಾಖಾ ತಂಡ ಗುರುತಿಸಿ, ಎರಡು ದಿನಗಳ ಹಿಂದೆಯೇ ಅವುಗಳ ಜಾಡು ಹಿಡಿದಿತ್ತು. ಮಂಗಳವಾರ ಇನ್ನೇನು ಕಾಡಾನೆ ಸೆರೆಯಾಯಿತು ಎನ್ನುವಷ್ಟರಲ್ಲೆ ಕಾಡಾನೆಗಳ ಹಿಂಡಿನ ಕೆಲ ಆನೆಗಳು ಅರಣ್ಯ ಸಿಬ್ಬಂದಿಗಳ ಮೇಲೆ ತಿರುಗಿ ಬಿದ್ದು, ಯೋಜನೆ ವಿಫಲವಾಗಿತ್ತು.
ಆದರೆ ಛಲ ಬಿಡದೆ ಬುಧವಾರ ಬೆಳಗ್ಗಿನಿಂದಲೇ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖಾ ತಂಡ ಕರಡಿಗೋಡಿನ ಭುವನಳ್ಳಿ ಕಾಫಿ ತೋಟದಲ್ಲಿ ಕಾಡಾನೆಗಳು ಇರುವುದನ್ನು ಪತ್ತೆ ಹಚ್ಚಿ, ತನ್ನ ಸೆರೆ ಹಿಡಿಯುವ ಕಾರ್ಯ ಯೋಜನೆಯ ಫಲಪ್ರದಗೊಳಿಸಲು ಎಚ್ಚರಿಕೆಯ ಹೆಜ್ಜೆಯನ್ನಿರಿಸಿತು. ಕಾಡಾನೆಗಳ ಹಿಂಡಿನಲ್ಲಿದ್ದ, ಕರಡಿಗೋಡು ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿದ್ದ ಪುಂಡಾನೆಯನ್ನು ಗುರುತಿಸಿ ಅದಕ್ಕೆ ಶೂಟರ್ ಅಕ್ರಂ ಅವರು ಅರಿವಳಿಕೆಯನ್ನು ಹೊಂದಿದ ಗುಂಡನ್ನು ಹೊಡೆದಿದ್ದರು.
ಕೆಲ ನಿಮಿಷಗಳ ಬಳಿಕ ಅರಿವಳಿಕೆಯ ಪ್ರಭಾವಕ್ಕೆ ಪುಂಡಾನೆ ಸಿಲುಕಿದ್ದನ್ನು ಖಾತರಿ ಪಡಿಸಿಕೊಂಡ ಅರಣ್ಯ ಇಲಾಖಾ ತಂಡ, ಕಾರ್ಯಾಚರಣೆಗೆ ದುಬಾರೆ ಮತ್ತು ಮತ್ತಿಗೋಡಿನಿಂದ ಕರೆಸಿಕೊಳ್ಳಲಾಗಿದ್ದ ಪ್ರಶಾಂತ, ಸುಗ್ರೀವ, ಧನಂಜಯ, ಅಭಿಮನ್ಯು ಮತ್ತು ಭೀಮ ಎಂಬ ಸಾಕಾನೆಗಳ ಸಹಕಾರದಿಂದ ಪುಂಡಾನೆಯನ್ನು ಹಗ್ಗದಿಂದ ಬಂಧಿಸಿದ್ದಲ್ಲದೆ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪುಂಡಾನೆಯನ್ನು ಅಲ್ಲೇ ಸಮೀಪದ ಚಿಕ್ಕನಳ್ಳಿ ತೋಟದವರೆಗೆ ಕರೆ ತಂದಿತು.
ಕ್ರೇನ್ ಬಳಕೆ: ಚಿಕ್ಕನಳ್ಳಿ ತೋಟದ ಹಾದಿಯಲ್ಲಿ ಪುಂಡಾನೆಯನ್ನು ಬಲವಾದ ಹಗ್ಗಗಳಿಂದ ಕಟ್ಟಿ, ಕ್ರೇನ್ ಸಹಕಾರದಿಂದ ಲಾರಿಗೇರಿಸಿ ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಯಿತು.

ಎರಡು ದಿನ ಬಳಿಕ ಅಮ್ಮತ್ತಿಯಲ್ಲಿ ಕಾರ್ಯಾಚರಣೆ
ಮಾಧ್ಯಮಗಳೊಂದಿಗೆ ಮಾತನಾಡಿದ ಎಸಿಎಫ್ ನೆಹರು ಅವರು, ಸರ್ಕಾರದ ಅನುಮತಿಯಂತೆ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಎರಡು ದಿನಗಳ ನಂತರ ಅಮ್ಮತ್ತಿ ಭಾಗದಲ್ಲಿರುವ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೀಭಾಗದ ಡಿ.ಸಿ.ಎಫ್. ಚಕ್ರಪಾಣಿ, ಎಸಿಎಫ್ ನೆಹರು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಸಂಜಿತ್ ಪೂವಯ್ಯ, ಕುಶಾಲನಗರ ವಲಯ ಎಸಿಎಫ್ ಗೋಪಾಲ್, ಆರ್‍ಎಫ್ಒ ಶಿವರಾಂ, ಶೂಟರ್ ಅಕ್ರಂ, ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾ. ರಮೇಶ್ ಮತ್ತು ಡಾ. ಚಿಟ್ಟಿಯಪ್ಪ, ಮಡಿಕೇರಿ ಮತ್ತು ಸೋಮವಾರಪೇಟೆ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಸುಮಾರು ಐವತ್ತಕ್ಕೂ ಹೆಚ್ಚಿನ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಕಳೆದ ಹಲವು ಸಮಯಗಳಿಂದ ಕರಡಿಗೋಡು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಪುಂಡಾನೆಗಳ ಹಾವಳಿಯಿಂದ ವ್ಯಾಪಕ ಕೃಷಿ ಹಾನಿಯಾಗಿದ್ದು, ಬೆಳೆಗಾರರು ಮತ್ತು ಕೃಷಿಕರು ತೋಟಗಳಿಗೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ರೈತ ಸಂಘದ ವತಿಯಿಂದ ಅರಣ್ಯ ಭವನಕ್ಕೆ ಮುತ್ತಿಗೆಯನ್ನೂ ಹಾಕಲಾಗಿತ್ತು. ಇದೀಗ ಪುಂಡಾನೆಯ ಸೆರೆಯಿಂದ ಕರಡಿಗೋಡು ಭಾಗದ ಗ್ರಾಮಸ್ಥರು ಒಂದಷ್ಟು ನಿಟ್ಟುಸಿರು ಬಿಡುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!