Saturday, September 23, 2023

Latest Posts

ಜನರ ಆರೋಗ್ಯ ದೃಷ್ಠಿಯಿಂದ ಪಾದಯಾತ್ರೆ ಕೈಬಿಡಿ: ಸಚಿವ ಎಸ್.ಟಿ.ಸೋಮಶೇಖರ್

ಹೊಸದಿಗಂತ ವರದಿ, ಮೈಸೂರು:

ರಾಜ್ಯದಲ್ಲಿ ಈಗ ಕೊರೋನಾ ಸೋಂಕು ವೇಗವಾಗಿ ಹರಡುತ್ತಿರುವ ಕಾರಣ ಜನರ ಆರೋಗ್ಯದ ದೃಷ್ಟಿಯಿಂದ ಮೇಕೆದಾಟು ಯೋಜನೆ ಕಾಮಗಾರಿ ಆರಂಭಕ್ಕೆ ಆಗ್ರಹಿಸಿ ಜ.9 ರಂದು ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯನ್ನ ಕೈ ಬಿಟ್ಟರೆ ಒಳ್ಳೆಯದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಸೋಮವಾರ ಮೈಸೂರಿನಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯ, ದೇಶಗಳಿಂದ ಬರುತ್ತಿರುವವರಿಂದ ಕೊರೋನಾ ರೂಪಾಂತರಿ ಒಮಿಕ್ರಾನ್ ವೇಗವಾಗಿ ರಾಜ್ಯದ ಲ್ಲಿ ಹರಡುತ್ತಿದೆ.ಈಗಾಗಲೇ ಎರಡನೇ ಅಲೆಯಲ್ಲಿ ಸಾಕಷ್ಟು ಕಷ್ಟ, ನೋವು ಅನುಭವಿಸಿದ್ದೇವೆ.ಮೂರನೇ ಅಲೆಯಲ್ಲಿ ಹಾಗಾಗಬಾರದು. ಕಾಂಗ್ರೆಸ್ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಪಾದಯಾತ್ರೆ ಯನ್ನು ಕೈಬಿಡಬೇಕು ಎಂದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ಮಾಡಲು ಏನು ಕೆಲಸ ಇಲ್ಲ. ಪಾದಯಾತ್ರೆ ಒಂದು ಚುನಾವಣೆ ಗಿಮಿಕ್ಸ್‌. ಸಮ್ಮಿಶ್ರ ಸರ್ಕಾರ ಇದ್ದಾಗಲೂ ಯೋಜನೆ ಬಗ್ಗೆ ಮಾತನಾಡಲಿಲ್ಲ. ಜತೆಗೆ ಇಷ್ಟು ವರ್ಷ ಏನು ಮಾಡಲಿಲ್ಲ. ಈಗ ರಾಜಕೀಯ ಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಇದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದು ಸಚಿವರು ಟಾಂಗ್​​ ನೀಡಿದರು.
ರಾಜ್ಯದಲ್ಲಿ ಲಾಕ್​​​ಡೌನ್ ವಿಚಾರದಲ್ಲಿ ಕೇಂದ್ರ ಹಾಗೂ ತಜ್ಞರ ಸಲಹೆಯ ಮೇರೆಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ತಜ್ಞರು ಕಠಿಣ ಕ್ರಮ ಸೇರಿದಂತೆ, ಏನೇ ಸಲಹೆ ಕೊಟ್ಟರೂ ಪಾಲಿಸುತ್ತೇವೆ. ಸದ್ಯಕ್ಕೆ ಬೇರೆ ರಾಜ್ಯದಷ್ಟು ಸಮಸ್ಯೆ ನಮ್ಮಲ್ಲಿ ಆಗಿಲ್ಲ. ಜನರು ಸಹಕಾರ ನೀಡುತ್ತಿದ್ದಾರೆ. ಎರಡು ದಿನಕ್ಕೊಮ್ಮೆ ಸಿಎಂ ತಜ್ಞರ ಸಭೆ ನಡೆಸುತ್ತಿದ್ದಾರೆ. 2ನೇ ಅಲೆಯಿಂದ ಆದ ಅನಾಹುತದಿಂದ ಜನರು ಎಚ್ಚೆತ್ತುಕೊಂಡಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!