ದಿಗಂತ ವರದಿ ಸೋಮವಾರಪೇಟೆ:
ಸೋಮವಾರಪೇಟೆ ಪಟ್ಟಣದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಇಲ್ಲಿನ ಸ್ಟೇಟ್’ಬ್ಯಾಂಕ್ ಆಫ್ ಇಂಡಿಯಾದ ಎಲ್ಲಾ ಸಿಬ್ಬಂದಿಗಳಿಗೂ ಕೋವಿಡ್ ಸೋಂಕು ಹರಡಿದ್ದು, ಕಳೆದ ಮೂರು ದಿನಗಳಿಂದ ಬ್ಯಾಂಕ್ ಮುಚ್ಚಿದೆ. ವಹಿವಾಟಿಗೆ ಬ್ಯಾಂಕ್ ಇಲ್ಲದೆ ಗ್ರಾಹಕರ ಪರದಾಟ ಒಂದೆಡೆಯಾದರೆ, ಬ್ಯಾಂಕ್’ಗೆ ದಿನನಿತ್ಯ ಓಡಾಡುವರಲ್ಲಿ ಸೋಂಕಿನ ಬಗ್ಗೆ ಆತಂಕ ಮನೆ ಮಾಡಿದೆ.
ಪಟ್ಟಣದ ಬಸವೇಶ್ವರ ರಸ್ತೆ, ಮಹದೇಶ್ವರ ಬಡಾವಣೆ ಹಾಗೂ ಕೆ.ಇ.ಬಿ ಸಮೀಪ ಮೂರು ಮಂದಿಗೆ ಕೋವಿಡ್ ಸೋಂಕು ತಗುಲಿದ್ದು ಮೂರು ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲಿದ್ದವರನ್ನು ಪರೀಕ್ಷಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಚಪ್ಪ ತಿಸಿದ್ದಾರೆ.
ಪಟ್ಟಣಕ್ಕೆ ಸಮೀಪದ ಖಾಸಗಿ ಶಾಲೆಯೊಂದರ ಎಂಟು ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದ್ದು, ಉಳಿದ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗುತ್ತಿದೆ.
ಗುರುವಾರ ಜಿಲ್ಲಾ ವೈದ್ಯಾಧಿಕಾರಿ ಡಾ,.ವೆಂಕಟೇಶ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ಮಾಧ್ಯದೊಂದಿಗೆ ಮಾತನಾಡಿದ ಅವರು, ಎಂಟು ಮಕ್ಕಳಿಗೆ ಕೋವಿಡ್ ಸೋಂಕಿರುವುದನ್ನು ಖಚಿತಪಡಿಸಿದರು. ಉಳಿದ ಮಕ್ಕಳ ಪರೀಕ್ಷೆ ನಡೆಸಲಾಗುತ್ತಿದೆ ಯಾರೂ ಆತಂಕ ಪಡಬೇಕಾಗಿಲ್ಲ ಎಂದರಲ್ಲದೆ, ಶಾಲೆಗೆ ರಜೆ ಕೊಡುವ ವಿಚಾರ ಆಡಳಿತ ಮಂಡಳಿಯವರಿಗೆ ಬಿಟ್ಟದ್ದು ಎಂದರು.