ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೇಲೆ ವಿಮಾನದಲ್ಲೇ ಹಲ್ಲೆ ನಡೆಸಿದ್ದಾರೆ. ಈ ಕುರಿತು ಸಿಪಿಐ(ಎಂ) ಸಂಸದ ಡಾ.ವಿ.ಶಿವದಾಸನ್ ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಅರುಣ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಭದ್ರತಾ ನಿಯಮಗಳ ಉಲ್ಲಂಘನೆ ಕುರಿತು ಗಮನ ಹರಿಸಿ, ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸೋಮವಾರ ಕಣ್ಣೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ, ಕೇರಳ ಮುಖ್ಯಮಂತ್ರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಿವದಾಸನ್ ಬರೆದ ಪತ್ರದಲ್ಲಿ, “ಪಿಣರಾಯಿ ವಿಜಯನ್ ಅವರ ಜೀವ ಮತ್ತು ಭದ್ರತೆಗೆ ಗಂಭೀರ ಬೆದರಿಕೆಯನ್ನುಂಟು ಮಾಡುವ ಮೂಲಕ ವಿಮಾನ ಭದ್ರತಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗಿದೆ. ದೈಹಿಕವಾಗಿ ಹಲ್ಲೆ ನಡೆಸುವ ಹೇಯ ಪ್ರಯತ್ನದ ಬಗ್ಗೆ ಗಮನ ಹರಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಅತ್ಯಂತ ಖಂಡನೀಯ ಘಟನೆಯನ್ನು ತ್ವರಿತವಾಗಿ ತನಿಖೆ ಮಾಡಬೇಕು ಮತ್ತು ಮುಖ್ಯಮಂತ್ರಿ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಸೋಮವಾರ ಅದೇ ವಿಮಾನದಲ್ಲಿದ್ದ ಕಪ್ಪು ಶರ್ಟ್ ಧರಿಸಿದ್ದ ಇಬ್ಬರು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ಕೋರಿ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಜಯನ್ ಅವರನ್ನು ರಕ್ಷಿಸಲು ವ್ಯಕ್ತಿಯೊಬ್ಬ ಪ್ರತಿಭಟನಾಕಾರರನ್ನು ವಿಮಾನದಲ್ಲಿ ತಳ್ಳುತ್ತಿರುವ ದೃಶ್ಯವಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.