ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ವಿಜಯದಶಮಿ ಸಾಲು ಸಾಲು ರಜೆ ಜೊತೆಗೆ ಸಾಲಕಟ್ಲ ಬ್ರಹ್ಮೋತ್ಸವ ಹಿನ್ನೆಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತಿರುಪತಿಗೆ ಬರುತ್ತಿದ್ದಾರೆ. 25 ಕಂಪಾರ್ಟ್ಮೆಂಟ್ಗಳಲ್ಲಿ ಭಕ್ತರು ದೇವರ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಎಲ್ಲ ಕಂಪಾರ್ಟ್ ಮೆಂಟ್ ಗಳು ಭರ್ತಿಯಾಗಿದ್ದು, ಶಿಲಾತೋರಣಂ ತನಕ ಸುಮಾರು 6 ಕಿ.ಮೀ.ವರೆಗೆ ಭಕ್ತರು ಕಾದು ಕುಳಿತಿದ್ದರು.
ಶ್ರೀವಾರಿ ಸರ್ವದರ್ಶನಕ್ಕೆ 36 ಗಂಟೆ ಬೇಕಾಗುತ್ತದೆ ಎಂದು ಟಿಟಿಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿನ್ನೆ 72,195 ಭಕ್ತರು ಸ್ವಾಮಿಯ ದರ್ಶನ ಪಡೆದಿದ್ದು, 41,071 ಭಕ್ತರು ಮುಡಿ ಸಮರ್ಪಿಸಿದ್ದಾರೆ. ಭಕ್ತರು ನೀಡಿದ ಕಾಣಿಕೆಯಿಂದ ಹುಂಡಿ ಆದಾಯ ನಿನ್ನೆ ಒಂದೇ ದಿನ ರೂ.2.17 ಕೋಟಿ ಎಂಬುದು ಬಹಿರಂಗವಾಗಿದೆ.
ಭಕ್ತರು ತಮ್ಮ ಸರದಿ ಬರುವವರೆಗೂ ಕ್ಯೂನಲ್ಲಿ ಸಂಯಮದಿಂದ ಇರುವಂತೆ ಟಿಟಿಡಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಶುಕ್ರವಾರ ವಿನಂತಿ ಮಾಡಿದ್ದಾರೆ. ಭಕ್ತರು ತಿರುಮಲದಲ್ಲಿರುವ ಯಾತ್ರಿ ವಸತಿ ಸಂಕೀರ್ಣಗಳಲ್ಲಿ ವಿಶ್ರಾಂತಿ ಪಡೆದು ಬೆಳಗ್ಗೆ ಸರತಿ ಸಾಲಿನಲ್ಲಿ ಪ್ರವೇಶಿಸಬೇಕು ಎಂದರು.