ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲಿಗೆ ಸಿಲುಕಿ 335 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ಮಹೆಬೂಬ್ನಗರ ಜಿಲ್ಲೆಯ ಕೌಕುಂಟ್ಲ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಗ್ರಾಮದ ನಾಯಿಗಳು ಅಟ್ಟಿಸಿಕೊಂಡು ಹೋಗಿದ್ದರಿಂದ ಹೆದರಿದ ಕುರಿಗಳು ಗ್ರಾಮದ ಹೊರವಲಯದಲ್ಲಿರುವ ರೈಲು ಹಳಿಗಳ ಮೇಲೆ ಬಂದಿವೆ. ವೇಗವಾಗಿ ಬಂದ ರೈಲು ಕುರಿಗಳಿಗೆ ಮೇಲೆ ಹರಿದು ದುರಂತ ಸಂಭವಿಸಿದೆ.
ಕೌಕುಂಟ್ಲ ಗ್ರಾಮದ ಪೆದ್ದ ಮಾಸಣ್ಣ, ದೂಳಣ್ಣ, ತಿರುಪತಿ ಎಂಬುವವರಿಗೆ ಸೇರಿದ ಸುಮಾರು 500 ಕುರಿಗಳನ್ನು ಗ್ರಾಮದ ರೈತ ವೇದಿಕೆ ಬಳಿ ಕರೆತರಲಾಗಿತ್ತು. ಬೆಳಗಿನ ಜಾವ 3 ಗಂಟೆಗೆ ಗ್ರಾಮದ ನಾಯಿಗಳು ಕುರಿ ಹಿಂಡಿನ ಮೇಲೆ ದಾಳಿ ನಡೆಸಿವೆ. ಕುರಿಗಳು ಭಯದಿಂದ ಗ್ರಾಮದ ಹೊರವಲಯಕ್ಕೆ ಓಡಿ, ಸಮೀಪದ ರೈಲ್ವೆ ಹಳಿ ದಾಟುತ್ತಿದ್ದಾಗ ಕುರಿಗಳಿಗೆ ರೈಲು ಡಿಕ್ಕಿ ಹೊಡೆದಿದೆ.
ಮಸ್ಸಣ್ಣವರ 160 ಕುರಿಗಳು, ದೂಳಣ್ಣವರ 100 ಕುರಿಗಳು ಹಾಗೂ ತಿರುಪತಯ್ಯನವರ 75 ಕುರಿಗಳು ಸೇರಿ ಒಟ್ಟು 335 ಕುರಿಗಳು ಸಾವನ್ನಪ್ಪಿವೆ. ಮಾಹಿತಿ ಪಡೆದ ತಹಶೀಲ್ದಾರ್ ಜ್ಯೋತಿ, ಎಂಪಿಡಿಒ ಶ್ರೀನಿವಾಸ್, ಪಶು ವೈದ್ಯಾಧಿಕಾರಿ ಜೀಸನ್ ಅಲಿ ಸ್ಥಳಕ್ಕಾಗಮಿಸಿ ಪಂಚನಾಮೆ ನಡೆಸಿದರು. ಮೃತ ಕುರಿಗಳ ಮೌಲ್ಯ ರೂ.33.50 ಲಕ್ಷ ಎಂದು ಅಂದಾಜಿಸಲಾಗಿದೆ.