ಹೊಸದಿಗಂತ ವರದಿ, ಮೈಸೂರು:
ತಮ್ಮ ವಿರುದ್ಧ ಬೇನಾಮಿ ಆಸ್ತಿ ಮಾಡಿರುವ ಆರೋಪ ಮಾಡಿದ್ದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರಿಗೆ ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಇತ್ತೀಚೆಗೆ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಸಿ.ಟಿ.ರವಿ ಅವರು
ಬೇನಾಮಿ ಹೆಸರಿನಲ್ಲಿ ಸುಮಾರು 400-500 ಎಕರೆ ಆಸ್ತಿ ಮಾಡಿದ್ದು, ಇವರು ಲೂಟಿ ರವಿ ಎಂದು ಆರೋಪ ಮಾಡಿದ್ದರು.
ಈ ಹಿನ್ನಲೆಯಲ್ಲಿ
ತಮ್ಮ ವಕೀಲರ ಮೂಲಕ ಎಂ. ಲಕ್ಷ್ಮಣ್ ರಿಗೆ ಲೀಗಲ್ ನೋಟಿಸ್ ಜಾರಿ ಮಾಡಿರುವ ಸಿ.ಟಿ.ರವಿ ಅವರು, ನೋಟಿಸ್ ತಲುಪಿದ 48 ಗಂಟೆಯೊಳಗೆ ಬಹಿರಂಗವಾಗಿ ಕ್ಷಮೆ ಕೇಳಿ, ತಮ್ಮ ಮೇಲೆ ಹೊರಿಸಲಾಗಿರುವ ಆರೋಪಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎಪ್ರಿಲ್ 20 ರಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನೀವು, ಕಳೆದ ಹತ್ತು ವರ್ಷಗಳ ಹಿಂದೆ ಸಿ.ಟಿ.ರವಿ ಅವರ ಆಸ್ತಿ 19ಎಕರೆ 3ಗುಂಟೆ ಇತ್ತು. ಈಗ ಬೆಂಗಳೂರು, ಚಿಕ್ಕಮಗಳೂರು, ಹಾಸನ, ದೆಹಲಿ ಸೇರಿದಂತೆ ಇತರೆಡೆ 400-500ಎಕರೆ ಆಸ್ತಿ ಸಂಪಾದನೆ ಮಾಡಿದ್ದೀರಿ, ಜೊತೆಗೆ ಇವರ ಭಾವ ಸುದರ್ಶನ್ ಅವರಿಗೆ, ಚಿಕ್ಕಮಗಳೂರಿನ ಎಲ್ಲಾ ಗುತ್ತಿಗೆಯನ್ನು ನೀಡಲಾಗಿದೆ. ಮೆಡಿಕಲ್ ಕಾಲೇಜಿನ 360 ಕೋಟಿ ಗುತ್ತಿಗೆಯನ್ನು ನೀಡಲಾಗಿದೆ ಎಂದು ಹೇಳುವ ಮೂಲಕ ಹಲವಾರು ಸುಳ್ಳು ಆರೋಪಗಳನ್ನು ಮಾಡಿದ್ದೀರಿ. ಇದನ್ನು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಮಾನನಷ್ಟ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಸಿ.ಟಿ.ರವಿ ಅವರು ಲೀಗಲ್ ನೋಟಿಸ್ ನಲ್ಲಿ ತಿಳಿಸಿದ್ದಾರೆ.