ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆಗಳ ಸಂದರ್ಭದಲ್ಲಿ ಉಚಿತ ಕೊಡುಗೆಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಇಂತಹ ಸಂಪ್ರದಾಯವು ಅತ್ಯಂತ ಗಂಭೀರ ವಿಚಾರ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರೆವಾರಿ (ಉಚಿತ ಕೊಡುಗೆ) ಸಂಸ್ಕೃತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟೀಕೆ ವ್ಯಕ್ತಪಡಿಸಿದ ಹಿನ್ನೆಲೆ ಸುಪ್ರೀಂ ಕೋರ್ಟ್ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕ ನಿಧಿಗಳಿಂದ ಉಚಿತ ಕೊಡುಗೆಗಳ ವಿತರಣೆ ಬಗ್ಗೆ ಪಕ್ಷಗಳು ಭರವಸೆ ನೀಡಲು ಅನುಮತಿ ನೀಡದಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಸಲ್ಲಿಕೆಯಾಗಿದ್ದ ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಉಚಿತ ಕೊಡುಗೆಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಚುನಾವಣಾ ಭರವಸೆಗಳ ಬಗ್ಗೆ ಮಾದರಿ ನೀತಿ ಸಂಹಿತೆಯಲ್ಲಿ ತಿಳಿಸಲಾಗಿದೆ. ಆದರೆ, ಇದನ್ನು ನಿಷೇಧಿಸಲು ಯಾವುದೇ ಕಾನೂನು ಜಾರಿಗೆ ತರುವ ಕೆಲಸ ಸರ್ಕಾರದಿಂದ ಆಗಬೇಕು ಎಂದು ಆಯೋಗದ ಪರ ವಕೀಲ ಮಾಹಿತಿ ನೀಡಿದರು.
ಚುನಾವಣಾ ಪ್ರಣಾಳಿಕೆಯು ಭರವಸೆಯಲ್ಲ ಎನ್ನುವುದನ್ನು ಸುಪ್ರೀಂ ಕೋರ್ಟ್ನ ತೀರ್ಪುಗಳು ತಿಳಿಸಿವೆ ಎಂದು ಸಹ ವಕೀಲರು ತಿಳಿಸಿದರು. ಆದರೆ, ಈ ಸಂಗತಿಯನ್ನು ಚುನಾವಣಾ ಆಯೋಗವೇ ಪರಿಗಣಿಸಬೇಕೆಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಹೇಳಿದರು.