ಹೊಸದಿಗಂತ ಡಿಜಿಟಲ್ ಡೆಸ್ಕ್:
ಮರು ಮತಎಣಿಕೆಗೆ ಒತ್ತಾಯಿಸಿ ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ನ ಕೆಲ ಗ್ರಾಮಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಜಿಲ್ಲಾಡಳಿತವು ಮುಂದಿನ ಆದೇಶದವರೆಗೆ 144ಸೆಕ್ಷನ್ ಜಾರಿ ಮಾಡಿದೆ.
ಸೊಹ್ರಾ, ಮೌಕೈಯಾವ್ ಮತ್ತು ಮೈರಾಂಗ್ನಲ್ಲಿ ಈ ಮೂರು ಸ್ಥಳಗಳ ಮತ ಎಣಿಕೆಯ ನಂತರ ಹಿಂಸಾಚಾರ ಭುಗಿಲೆದ್ದಿದೆ. ಸೊಹ್ರಾದ ಸೈತ್ಸೋಪೆನ್ ಪ್ರದೇಶದಲ್ಲಿ, ಶೆಲ್ಲಾ ಕ್ಷೇತ್ರದ ಎನ್ಪಿಪಿ ಅಭ್ಯರ್ಥಿಯ ಬೆಂಬಲಿಗರಾದ ಗ್ರೇಸ್ ಮೇರಿ ಖಾರ್ಪುರಿ ಅವರು ಚುನಾವಣೆಯಲ್ಲಿ ಹಾಲಿ ಶಾಸಕ ಬಾಲಾಜಿದ್ ಕುಪರ್ ಸಿನ್ರೆಮ್ ವಿರುದ್ಧ ಸೋತು ಮರುಎಣಿಕೆಗೆ ಒತ್ತಾಯಿಸಿದರು.
ನೂರಾರು NPP ಬೆಂಬಲಿಗರು ಮತಗಳ ಮರು ಎಣಿಕೆಗೆ ಒತ್ತಾಯಿಸಿ ಸೊಹ್ರಾ ಸಿವಿಲ್ ಉಪವಿಭಾಗದ ಕಚೇರಿಗೆ ಮೆರವಣಿಗೆ ನಡೆಸಿ ತಮ್ಮ ಬೇಡಿಕೆಗೆ ಒತ್ತಾಯಿಸಿದರು.ಈ ವೇಳೆ ಉಪವಿಭಾಗಾಧಿಕಾರಿ ಹೇಮಾ ನಾಯಕ್ ಅವರು ನೆರೆದಿದ್ದ ಜನರೊಂದಿಗೆ ಮಾತುಕತೆ ನಡೆಸಿ ಮರು ಎಣಿಕೆಗೆ ಮನವಿಯನ್ನು ತಿರಸ್ಕರಿಸಿದರು.
ಇದರಿಂದ ಸಿಟ್ಟಿಗೆದ್ದ ಜನರು ಎಸ್ಡಿಒ ಕಚೇರಿ ಮತ್ತು ನ್ಯಾಯಾಲಯದ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸುವುದರ ಜೊತೆಗೆ ಆ ಪ್ರದೇಶದಲ್ಲಿನ ಹುಲ್ಲಿಗೆ ಬೆಂಕಿ ಹಚ್ಚಿದರು. ಪೊಲೀಸರು ಮತ್ತು ಸಿಆರ್ಪಿಎಫ್ ಸಿಬ್ಬಂದಿಯ ಮೇಲೂ ಕಲ್ಲು ತೂರಾಟ ನಡೆದಿದೆ.
ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಜಲಫಿರಂಗಿ, ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಬೇಕಾಯಿತು. ಸೆಕ್ಷನ್ 144 ಸಿಆರ್ಪಿಸಿಯನ್ನು ಸಹ ವಿಧಿಸಲಾಗಿದ್ದು, ಈ ಪ್ರದೇಶದಲ್ಲಿ ಜನರು ಸೇರುವುದನ್ನು ನಿಷೇಧಿಸಲಾಗಿದೆ.
ಪಶ್ಚಿಮ ಜೈನ್ತಿಯಾ ಹಿಲ್ಸ್ನ ಮೌಕೈಯಾವ್ ಕ್ಷೇತ್ರದಲ್ಲಿ, ಸಹಸ್ನಿಯಾಂಗ್ ಗ್ರಾಮದಲ್ಲಿ ಯುಡಿಪಿ ಬೆಂಬಲಿಗರ ಮನೆಗಳ ಮೇಲೆ ಎನ್ಪಿಪಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದರು.
ಮತಗಳ ಮರು ಎಣಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಾವಿರಾರು ಕಾಂಗ್ರೆಸ್ ಬೆಂಬಲಿಗರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಸಾರ್ವಜನಿಕರು ಸರ್ಕಾರಿ ವಾಹನಕ್ಕೂ ಬೆಂಕಿ ಹಚ್ಚಿದರು. ಮೈರಾಂಗ್ನಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು, ಪೊಲೀಸರ ಬಂದೋಬಸ್ತ್ನಲ್ಲಿದೆ.