ಕಾಫಿ ತೋಟದಲ್ಲಿದ್ದ ಬೀಟೆ ಮರ ಕಡಿತ: ಮೂವರ ಬಂಧನ

ಹೊಸದಿಗಂತ ವರದಿ,ಮಡಿಕೇರಿ:

ಕಾಫಿ ತೋಟದಲ್ಲಿದ್ದ ಬೀಟೆ ಮರವನ್ನು ಕಡಿದು ನಾಟಾಗಳನ್ನಾಗಿ ಪರಿವರ್ತಿಸಿ ಅದರ ತೊಗಟೆ ತೆಗೆಯುತ್ತಿದ್ದ ಸಂದರ್ಭ ದಾಳಿ ನಡೆಸಿರುವ ತಿತಿಮತಿ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 5 ಲಕ್ಷ ರೂ. ಮೌಲ್ಯದ ಬೀಟೆ ಮರವನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ಹಿನ್ನೆಲೆ: ಅ.29ರಂದು ಪೊನ್ನಂಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ಬೆಸೂರು ಗ್ರಾಮದ ಪಿ.ಡಾಲು ಎಂಬವರ ತೋಟದಲ್ಲಿದ್ದ ಒಂದು ಬೀಟೆ ಮರವನ್ನು ಕಡಿದು ಅದನ್ನು ನಾಟಾಗಳನ್ನಾಗಿ ಪರಿವರ್ತಿಸಿ ತೊಗಟೆ ತೆಗೆಯಲಾಗುತ್ತಿತ್ತು.
ಈ ಮಾಹಿತಿ ಅರಿತ ಪೊನ್ನಂಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ 5 ಲಕ್ಷ ರೂ. ಮೌಲ್ಯದ 10 ಬೀಟೆ ನಾಟಾಗಳು, 4 ಬೀಟೆ ಬಿಲ್ಲೆಟ್ಸ್‍ಗಳು, 2 ಕೊಡಲಿಗಳು ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪ ಕಾಳಪ್ಪ ಕಾಲೋನಿ ನಿವಾಸಿ ಸಾಜನ್, ತಿತಿಮತಿ ನೆಹರೂ ಕಾಲೋನಿಯ ಚಾತ ಹಾಗೂ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮ ನಿವಾಸಿ ಬಿ.ಎಸ್.ಕೃಷ್ಣಪ್ಪ ಎಂಬ ಮೂರು ಮಂದಿ ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಿ, ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವೀರಾಜಪೇಟೆ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣ ಮಾರ್ಗದರ್ಶನದಲ್ಲಿ ತಿತಿಮತಿ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು, ಅರಣ್ಯಾಧಿಕಾರಿ ಬಿ.ಎಂ. ಶಂಕರ್, ಉಪ ವಲಯ ಅರಣ್ಯಾಧಿಕಾರಿ ಕೆ.ಜಿ. ದಿವಾಕರ್, ಗಣೇಶ್, ನಾಗರಾಜ್ ಶೇಟ್, ರಕ್ಷಿತ್, ಅರಣ್ಯ ರಕ್ಷಕರಾದ ಬಿ.ಎಂ. ಪೊನ್ನಪ್ಪ, ಅಂತೋಣ ಪ್ರಕಾಶ್, ಕೆ.ಆರ್. ಚೇತನ್ ಹಾಗೂ ಆರ್.ಆರ್.ಟಿ. ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!