ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ‘ರೆಮಲ್’ (Remal) ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳ ಸೇರಿ ಈಶಾನ್ಯ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಈ ನಡುವೆ ಪ್ರಧಾನಿ ಮೋದಿ (Narendra Modi) ಸಹ ರೆಮಲ್ ಚಂಡಮಾರುತದ ಬಗ್ಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರಕ್ಷಣಾ ಪಡೆ ಮಾಡಿಕೊಂಡಿರುವ ಸಿದ್ದತೆ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದ್ದಾರೆ.
ರೆಮಲ್ ಚಂಡಮಾರುತ ಕುರಿತಾಗಿ ಅಧಿಕಾರಿಗಳೊಂದಿಗೆ ಸಭೆ ಮಾಡಿರುವ ಪ್ರಧಾನಿ ಮೋದಿ, ರಾಜ್ಯಗಳು, ಕೇಂದ್ರ ಸಚಿವಾಲಯಗಳು ರೆಮಲ್ ಚಂಡಮಾರುತವನ್ನು ಎದುರಿಸಲು ಯಾವೆಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುದರ ಕುರಿತು ಮಾಹಿತಿ ಪಡೆದುಕೊಂಡರು.
ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು, ವಿದ್ಯುತ್, ದೂರಸಂಪರ್ಕ, ಆರೋಗ್ಯ, ಕುಡಿಯುವ ನೀರು ಮುಂತಾದ ಎಲ್ಲಾ ಅಗತ್ಯ ಸೇವೆಗಳನ್ನು ಯಾವುದೇ ಅಡಚಣೆಯ ಸಂದರ್ಭದಲ್ಲಿ ತಕ್ಷಣವೇ ಜಾರಿಗೆ ಬರುತ್ತವೆ ಸೂಚನೆ ನೀಡಿದ್ದಾರೆ. ಅಗತ್ಯ ಔಷಧಗಳು ಸಂಗ್ರಹಣೆ ಸೇರಿದಂತೆ ನಿಯಂತ್ರಣ ಕೊಠಡಿಗಳು 24X7 ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.
ಇಂದು ಮಧ್ಯರಾತ್ರಿ ಕರಾವಳಿಗೆ ಅಪ್ಪಳಿಸಲಿರುವ ‘ರೆಮಲ್’ ಚಂಡಮಾರುತ, ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ಮಧ್ಯೆ ಹಾದುಹೋಗಲಿದೆ. ಗಂಟೆಗೆ 110ರಿಂದ 120 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸೈಕ್ಲೋನ್ ಅಪ್ಪಳಿಸುವ ಮುನ್ನ ಈಶಾನ್ಯ ರಾಜ್ಯಗಳಾದ ಒಡಿಶಾ, ಮಿಜೋರಾಂ, ತ್ರಿಪುರಾ, ಮೇಘಾಲಯ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ದಕ್ಷಿಣ ಮಣಿಪುರದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ.