ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದುವರೆಗೆ ‘ವರ್ಕ್ ಫ್ರಂ ಹೋಮ್’ ಕೇಳಿದ್ದೆ . ಆದರೆ, ಇದೇ ಮೊದಲ ಸಲ ‘ವರ್ಕ್ ಫ್ರಂ ಜೈಲ್’ (ಜೈಲಿನಿಂದ ಕೆಲಸ) ಬಗ್ಗೆ ಕೇಳುತ್ತಿದ್ದೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಕಾಲೆಳೆದಿದ್ದಾರೆ.
ಫತೇಗಢ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿಯ ಗೆಜ್ಜ ರಾಮ್ ವಾಲ್ಮೀಕಿ ಪರ ಖನ್ನಾದಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರ ಅಸ್ತಿತ್ವದಲ್ಲಿದೆ. ಎಂತಹ ಆಡಳಿತ ನೀಡುತ್ತಿದೆ ಎಂಬ ಬಗ್ಗೆ ನಾನೇನು ಹೆಚ್ಚು ಹೇಳಬೇಕಾಗಿಲ್ಲ’ ಎಂದು ಹೇಳಿದ್ದಾರೆ.
ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿರುವ ಕೇಜ್ರಿವಾಲ್ ಕುರಿತು ಮಾತನಾಡಿರುವ ಸಿಂಗ್, ‘ದೆಹಲಿಯಲ್ಲಿಯೂ ಎಎಪಿ ಸರ್ಕಾರವಿದೆ. ಆದರೆ, ಆ ಪಕ್ಷದ ನಾಯಕ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಸೇರಿದ್ದರು’ ಎಂದಿದ್ದಾರೆ.
‘ಯಾವುದೇ ನಾಯಕ ತಮ್ಮ ವಿರುದ್ಧ ಆರೋಪಗಳು ಕೇಳಿ ಬಂದರೆ, ಇತ್ಯರ್ಥವಾಗುವವರೆಗೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ನೈತಿಕ ಸ್ಥೈರ್ಯ ಹೊಂದಿರಬೇಕು. ಅದೇ ನೈತಿಕತೆ ಎಂದು ಕೇಜ್ರಿವಾಲ್ ಪ್ರತಿಪಾದಿಸುತ್ತಾರೆ. ಆದರೆ, ಅಬಕಾರಿ ಹಗರಣದಲ್ಲಿ ಸ್ವತಃ ಜೈಲಿಗೆ ಸೇರಿದಾಗ, ತಾವು ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಮತ್ತು ಜೈಲಿನಿಂದಲೇ ಕೆಲಸ ಮಾಡುವುದಾಗಿ ಹೇಳುತ್ತಾರೆ. ನಮಗೆ ‘ವರ್ಕ್ ಫ್ರಂ ಹೋಮ್’ ಬಗ್ಗೆ ಗೊತ್ತಿತ್ತು. ಅದರೆ, ಇದೇ ಮೊದಲ ಬಾರಿ ‘ವರ್ಕ್ ಫ್ರಂ ಜೈಲ್’ ಬಗ್ಗೆ ಕೇಳುತ್ತಿದ್ದೇನೆ’ ಎಂದು ತಿವಿದಿದ್ದಾರೆ.