ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ದಲಿತ ಯುವಕನನ್ನು ಆಕೆಯ ಸೋದರರು ಕೊಲೆ ಮಾಡಿರುವ ಘಟನೆ ಕಲಬುರಗಿಯ ವಾಡಿಯಲ್ಲಿ ನಡೆದಿದೆ.
ಕೊಲೆಯಾದ 25 ವರ್ಷದ ದಲಿತ ಯುವಕ ವಿಜಯ್ ಕಾಂಬಳೆ ಮತ್ತು ಮುಸ್ಲಿಂ ಯುವತಿ ಇಬ್ಬರು ಕಳೆದ ಐದು ವರ್ಷಗಳಿಂದ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇದಕ್ಕೆ ಮುಸ್ಲಿಂ ಯುವತಿಯ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಕುಪಿತಗೊಂಡ ಆಕೆಯ ಸೋದರ ಮತ್ತು ಆತನ ಗೆಳೆಯ ಇಬ್ಬರೂ ಸೇರಿ ಮೊನ್ನೆ ತಡರಾತ್ರಿ ದಲಿತ ಯುವಕ ವಿಜಯ್ ಕಾಂಬಳೆಯನ್ನು ಹತ್ಯೆ ಮಾಡಿದ್ದಾರೆ.
ವಾಡಿ ಪಟ್ಟಣದ ರೈಲ್ವೆ ಕ್ವಾಟರ್ಸ್ ಬಳಿ ಆತನನ್ನು ಕರೆದೊಯ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಸಹೋದರ ಶಾಬೊದ್ದಿನ್ (19), ಆತನ ಸ್ನೇಹಿತ ನವಾಜ್ (19) ಎಂದು ಗುರುತಿಸಲಾಗಿದ್ದು ದಲಿತ ಯುವಕ ಅವರ ಸೋದರಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಈಗ 6 ತಿಂಗಳ ಹಿಂದೆಯೂ ಕೂಡ ತಮ್ಮ ಸೋದರಿಯನ್ನು ಪ್ರೀತಿಸುತ್ತಿರುವುದಕ್ಕೆ ಕೋಪಗೊಂಡ ಆಕೆಯ ಸೋದರರು ವಿಜಯ ಕಾಂಬಳೆ ಮನೆಯ ಹತ್ತಿರ ಬಂದು ಬೆದರಿಕೆ ಹಾಕಿದ್ದರು ಎಂದು ಆತನ ತಾಯಿ ಹೇಳಿದ್ದಾರೆ. ಪೋಲೀಸರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.