ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಬ್ರವರಿ 4 ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ 1008 ಸಾಧು-ಸಂತರ ಪಾದ ಪೂಜೆ ಮಾಡುವ ಮೂಲಕ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮಾಡಲಾಗುತ್ತದೆ ಎಂದು ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಘೋಷಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1008 ಸಾಧು ಸಂತರ ಪಾದ ಪೂಜೆ ಮೂಲಕ ಬ್ರಿಗೇಡ್ ಉದ್ಘಾಟನೆ ನಡೆಯಲಿದೆ. 1 ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕನ್ಹೇರಿ ಮಠದ ಶ್ರೀಗಳು ಹಾಗೂ ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠದ ತಿಂಥಣಿ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಉದ್ಘಾಟನೆ ಮಾಡುತ್ತಾರೆ. ಜನವರಿ 12 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಪ್ರವಾಸದ ಮೂಲಕ ಬ್ರಿಗೇಡ್ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದ್ದಾರೆ.
ಹಿಂದು ಸಮಾಜದ ಪರವಾಗಿ ಬ್ರಿಗೇಡ್ ಹೋರಾಟ ಮಾಡಲಿದೆ. ಹಿಂದುಳಿದ ವರ್ಗದ ಸ್ವಾಮೀಜಿಗಳ ಪರ ಬ್ರಿಗೇಡ್ ಕೆಲಸ ಮಾಡಲಿದೆ. ಬ್ರಿಗೇಡ್ ಸ್ಥಾಪನೆ ಮಾಡುವುದಕ್ಕೆ ಮುಖ್ಯ ಉದ್ದೇಶ ಹಿಂದುಳಿದ ಮಠಗಳ ಅಭಿವೃದ್ಧಿ. ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಇರಲಿದೆ ಎಂದಿದ್ದಾರೆ.
ನನ್ನ ಜೀವನದಲ್ಲಿ ನಾನು ರಾಜಕಾರಣದ ಜೊತೆ ಜೊತೆಗೆ ಸಾಧು ಸಂತರ ಸೇವೆ ಮಾಡಿದ್ದೇನೆ. ರಾಜಕಾರಣದ ಜೊತೆ ಜೊತೆಗೆ ಧಾರ್ಮಿಕ ಕಾರ್ಯದಲ್ಲೂ ನಾನು ಭಾಗಿಯಾಗುತ್ತಿದ್ದೇನೆ. ಈ ಹಿಂದೆ ಮಠ ಮಂದಿರಗಳಿಗೆ ಹಣ ನೀಡುವಂತೆ ಮಾಡಿದ್ದು ನಾನೇ. ಹೀಗಾಗಿ ನಾನು ಧಾರ್ಮಿಕ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಹೋರಾಟ ವಿಚಾರವಾಗಿ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪ ಬಂದಾಗ ನಾನು ರಾಜೀನಾಮೆ ನೀಡಿದ್ದೆ. ನಾನು ಆರ್ಎಸ್ಎಸ್ನಿಂದ ಬೆಳೆದು ಬಂದವನು. ನನ್ನ ವಿರುದ್ಧ ಆರೋಪ ಬಂದ ತಕ್ಷಣವೇ ರಾಜೀನಾಮೆ ನೀಡಿದ್ದೆ. ಕೆಲವರು ನನ್ನ ವಿರುದ್ಧ ರಾಜಕೀಯ ಮಾಡಿದರು. ಅವರು ಈಗ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.