ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲದಲ್ಲಿ ನೀರು ತುಂಬಿಕೊಂಡು ತೊಂದರೆಗೀಡಾಗುವ ಪ್ರದೇಶಗಳನ್ನು ಗುರುತಿಸಿ ಶೀಘ್ರವೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಅಧಿಕಾರಿಗಳ ಜೊತೆ ಬಿಎಂಟಿಸಿ ಬಸ್ನಲ್ಲಿ ನಗರದ ಕೆಲವು ಭಾಗಗಗಳಲ್ಲಿ ಸಂಚಾರ ನಡೆಸಿದ ಡಿಸಿಎಂ ಅವರು, ಮಳೆಗಾಲ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತೆ ಅನಾಹುತಕ್ಕೀಡಾಗುವುದನ್ನು ತಪ್ಪಿಸಲು ಪೂರ್ವ ಸಿದ್ಧತೆ ನಡೆಸಬೇಕಿದೆ. ಹೀಗಾಗಿ ಅಧಿಕಾರಿಗಳು ಯಾವೆಲ್ಲಾ ಸಿದ್ಧತೆ ನಡೆಸಿದ್ದಾರೆ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇನೆ ಎಂದರು.
ಕಾರಂತ್ ಬಡಾವಣೆ ಅಭಿವೃದ್ಧಿ:
ಶಿವರಾಮ ಕಾರಂತ್ ಬಡಾವಣೆಯನ್ನು ಪುನರ್ ಅಭಿವೃದ್ಧಿ ಮಾಡಲಾಗುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ 3 ಸಾವಿರ ಜಾಗದಷ್ಟು ಜಾಗ ಸಿಕ್ಕಿದೆ. ಅದರಲ್ಲಿ ಕೆಲಸ ಯಾವ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲು ಸಭೆ ನಡೆಸಿದ್ದೇನೆ. ಇದಕ್ಕಾಗಿ ಆಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಲೂ ಸೂಚಿಸಲಾಗಿದೆ ಎಂದು ಹೇಳಿದರು.