ದಿಗಂತ ವರದಿ ಅಂಕೋಲಾ:
ತಾಲೂಕಿನ ಹುಲಿದೇವರವಾಡ ರೈಲ್ವೆ ಹಳಿ ಪಕ್ಕದಲ್ಲಿ ಯುವಕನೋರ್ವನ ಮೃತ ದೇಹ ಪತ್ತೆಯಾಗಿದ್ದು ಮೃತ ಯುವಕನನ್ನು ಪಟ್ಟಣದ ಅಂಬಾರಕೊಡ್ಲ ನಿವಾಸಿ ವಸಂತ ವೆಂಕಟ್ರಮಣ ಗೌಡ (27) ಎಂದು ಗುರುತಿಸಲಾಗಿದೆ.
ಅವಿವಾಹಿತನಾಗಿದ್ದ ಈತ ಕೂಲಿ ಕೆಲಸ ಮಾಡಿಕೊಂಡು ತನ್ನ ಕುಟುಂಬದ ಜೀವನ ನಿರ್ವಹಣೆಗೆ ಆಸರೆಯಾಗಿದ್ದ ಎಂದು ತಿಳಿದು ಬಂದಿದ್ದು ಬುಧವಾರ ರಾತ್ರಿ ಸಮಯದಲ್ಲಿ ರೈಲ್ವೆ ಹಳಿಯಲ್ಲಿ ಮಲಗಿ ಚಲಿಸುತ್ತಿರುವ ರೈಲಿನಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಇತ್ತೀಚಿನ ದಿನಗಳಲ್ಲಿ ಆಗಾಗ ಹೊಟ್ಟೆ ನೋವು ಎಂದು ಹೇಳಿಕೊಳ್ಳುತ್ತಿದ್ದ ಯುವಕನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ಮತ್ತು ಸಂಗಡಿಗರು ಮೃತ ದೇಹವನ್ನು ಮೇಲೆತ್ತಲು ಸಹಕರಿಸಿದ್ದು ಪುರಸಭೆ ಸದಸ್ಯ ಪ್ರಕಾಶ ಗೌಡ ಉಪಸ್ಥಿತರಿದ್ದರು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.