ಹೊಸದಿಗಂತ ವರದಿ ಮಡಿಕೇರಿ:
ಇಲ್ಲಿನ ಸೋಮವಾರಪೇಟೆ ಸಮೀಪದ ನಗರೂರು ಗ್ರಾಮದ ಹೆದ್ದಾರಿಯಲ್ಲಿ ಗುರುವಾರ ಸಂಭಸಿದ್ದ ಬೈಕ್ ಮತ್ತು ಸ್ಕೂಟರ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಿ.ಆರ್.ಪಿ.ಎಫ್ ಯೋಧ ಕೆ.ಬಿ.ಡಾಲು(36) ಶುಕ್ರವಾರ ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಯಡವಾರೆ ಗ್ರಾಮದ ಕಲ್ಲುಗದ್ದೆ ಮನೆ ದಿ.ಬಾಲಕೃಷ್ಣ ಎಂಬವರ ಪುತ್ರ ಯೋಧ ಡಾಲು, 13 ವರ್ಷದಿಂದ ಸಿ.ಆರ್.ಪಿ.ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಾಲಿ ಜಮ್ಮು ಕಾಶ್ಮಿರದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾಲು, ಮೂರು ದಿನಗಳ ಹಿಂದೆ ರಜೆ ಇದ್ದ ಕಾರಣ ಮನೆಗೆ ಬಂದಿದ್ದರು.
ಶುಕ್ರವಾರ ಸೋಮವಾರಪೇಟೆ ಪಟ್ಟಣಕ್ಕೆ ಬಂದು ಬ್ಯಾಂಕ್ ವ್ಯವಹಾರ ಮುಗಿಸಿ, ಸ್ಕೂಟರ್’ನಲ್ಲಿ ವಾಪಾಸ್ಸು ಮನೆಗೆ ತೆರಳುತ್ತಿದ್ದ ಸಂದರ್ಭ ನಗರೂರು ಸಮೀಪದಲ್ಲಿ ಅಪಘಾತ ಸಂಭವಿಸಿತ್ತು. ರಸ್ತೆ ಮೇಲೆ ಬಿದ್ದ ಡಾಲು ಹೆಲ್ಮೆಟ್ ಧರಿಸದ ಕಾರಣ ತಲೆಯ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದು, ರಕ್ತಸ್ರಾವವಾಗಿತ್ತು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮೈಸೂರಿಗೆ ಕರೆದೊಯ್ಯಲಾಗಿತ್ತು.
ಬಡ ಕೃಷಿಕ ಕುಟುಂಬದ ಇವರಿಗೆ ಯಡವಾರೆ ಗ್ರಾಮದಲ್ಲಿ ಮುಕ್ಕಾಲು ಎಕರೆ ಕೃಷಿ ಭೂಮಿಯಿದೆ. ಇವರ ಇಬ್ಬರು ಸಹೋದರಿಯರು ವಿವಾಹವಾಗಿದ್ದಾರೆ. ತಾಯಿ ನಾಗವೇಣಿ , ಪತ್ನಿ ರಾಜೇಶ್ವರಿ, ಏಳು ಮತ್ತು ಎರಡೂವರೆ ವರ್ಷದ ಇಬ್ಬರು ಪುತ್ರಿಯರಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತಿದ್ದ ಮಗನನ್ನು ಕಳೆದುಕೊಂಡ ತಾಯಿ ಅಕ್ರಂದನ ಮುಗಿಲು ಮುಟ್ಟಿದೆ.
ಶನಿವಾರ ಯಡವಾರೆ ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನೊಂದು ಬೈಕ್ನಲ್ಲಿದ್ದ ಕಾಗಡಿಕಟ್ಟೆ ಗ್ರಾಮದ ಮನೋಜ್ ಭಟ್ ಹಾಗೂ ಪೈಂಟರ್ ಆಸೀಫ್ ತೀವ್ರ ಗಾಯಗೊಂಡು ಮಡಿಕೇರಿ ಮತ್ತು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.