ಹೊಸದಿಗಂತ ವರದಿ ಮಡಿಕೇರಿ:
ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾವಿಗೀಡಾದ ಸಮಯದಲ್ಲೇ ಅಪಘಾತಕ್ಕೆ ಕಾರಣನಾದ ವ್ಯಕ್ತಿಯೂ ನೇಣಿಗೆ ಶರಣಾದ ಘಟನೆ ನಡೆದಿದೆ.
ನಗರದ ಚೈನ್’ಗೇಟ್ ಬಳಿ ಶುಕ್ರವಾರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮಾಸ್ಟರ್ ಡಿಗ್ರಿ ವಿದ್ಯಾರ್ಥಿ ಧನಲ್ ಸುಬ್ಬಯ್ಯ(24) ಹಾಗೂ ಹೆರವನಾಡಿನ ಹೆಚ್.ಡಿ.ತಮ್ಮಯ್ಯ ಎಂಬವರ ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿಯಾಗಿದ್ದವು.
ಈ ಘಟನೆಯಲ್ಲಿ ಗಾಯಗೊಂಡಿದ್ದ ಮಕ್ಕಂದೂರು ಸಮೀಪದ ಕಾಂಡನಕೊಲ್ಲಿ ನಿವಾಸಿ ಧನಲ್ ಸುಬ್ಬಯ್ಯ ಭಾನುವಾರ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ, ಇದೇ ಸಮಯದಲ್ಲಿ ತಮ್ಮಯ್ಯ (57) ಅವರು ಕೂಡಾ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹಾಗೂ ಆತ್ಮಹತ್ಯೆಗೆ ಸಂಬಂಧಿಸಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.