ಹೊಸದಿಗಂತ ವರದಿ ಶಿವಮೊಗ್ಗ :
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಬಿ.ಎಸ್ಸಿ ಅರಣ್ಯಶಾಸ್ತ ಪದವೀಧರರನ್ನೇ ಪರಿಗಣಿಸುವಂತೆ ಆಗ್ರಹಿಸಿ ಕರ್ನಾಟಕ ಅರಣ್ಯ ಪದವೀಧರರು ಮತ್ತಿ ವಿದ್ಯಾರ್ಥಿಗಳ ಸಂಘದಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ವರದಿಯಂತೆ ಅರಣ್ಯ ಪದವೀಧರರಿಗೆ ವಲಯಾರಣ್ಯಾಧಿಕಾರಿ ಹುದ್ದೆಯಲ್ಲಿ ಶೇ.75 ಸ್ಥಾನಗಳನ್ನು ಮೀಸಲಿಟ್ಟು 2012 ರಲ್ಲಿ ಆದೇಶ ಮಾಡಲಾಗಿತ್ತು. ಆದರೆ 2018 ರಲ್ಲಿ ಮಾಡಲಾದ ತಿದ್ದುಪಡಿ ಅನ್ವಯ ನೇರ ನೇಮಕಾತಿಯನ್ನು ಶೇ.50 ಇಳಿಸಲಾಗಿದೆ. ಇದರಿಂದಾಗಿ ಅರಣ್ಯ ಪದವೀಧರರಿಗೆ ವಂಚನೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅರಣ್ಯಶಾಸ್ತ್ರದಲ್ಲಿಯೇ ವಿಶೇಷಪರಿಣತಿ ಪಡೆದ ವಿದ್ಯಾರ್ಥಿಗಳಿಗೆ ಬೇರೆ ಯಾವುದೇ ಹುದ್ದೆಗಳಿಗೂ ಅವಕಾಶ ಇರುವುದಿಲ್ಲ. ಅರಣ್ಯ ಇಲಾಖೆಗೆ ಮಾತ್ರ ಪರಿಗಣಿಸಲಾಗುತ್ತದೆ. ಇಲ್ಲಿಯೂ ಕೂಡ ಬೇರೆ ಪದವಿ ಪಡೆದವರನ್ನು ಪರಿಗಣಿಸಿದರೆ ಅನ್ಯಾಯವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.