ಹೊಸದಿಗಂತ ವರದಿ ಬೀದರ್:
ಆರೈಕೆ ಮಾಡಲಾಗದೇ 50 ದಿನದ ಹಸುಗೂಸನ್ನು ಹೆತ್ತ ತಾಯಿ ಸೇರಿ ನಾಲ್ಕು ಜನ ಕೊಲೆ ಮಾಡಿ ಬಾವಿಗೆ ಬಿಸಾಡಿದ ಅಮಾನವೀಯ ಕೃತ್ಯ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್ (ದೇ) ಗ್ರಾಮದಲ್ಲಿ ನಡೆದಿದೆ.
ಪತ್ನಿ ವಾಣಿಶ್ರೀ ಹೆರಿಗೆಗೆ ಎಂದು ತವರು ಮನೆಗೆ ಬಂದಾಗ ಮಾವ ಬಸವರಾಜ್, ಅತ್ತೆ ರತ್ನಮಾ, ಸಹೋದರ ಸಂತೋಷ್ ಸೇರಿ ಕೊಲೆ ಮಾಡಿದ್ದಾರೆ ಎಂದು ಪತಿ ಸಂಜು ಗಂಭೀರ ಆರೋಪ ಮಾಡಿದ್ದಾರೆ.
ಎರಡು ವರ್ಷದ ಹಿಂದೆ ಮಹಾರಾಷ್ಟ್ರ ದೇಗೂಲೂರ ತಾಲೂಕಿನ ಕವಳಗಡ್ಡ ಗ್ರಾಮದ ಸಂಜು ಎಂಬುವವರ ಜೊತೆ ವಾಣಿಶ್ರೀ ಮದುವೆಯಾಗಿದ್ದರು. ಮದುವೆಯಾದ ಮೇಲೆ ಇಬ್ಬರು ತೆಲಂಗಾಣದ ನಿಜಾಮಬಾದ್ನಲ್ಲಿ ವಾಸಿಸುತ್ತಿದ್ದರು.

ಮಗುವನ್ನು ದೇವರು ತೆಗೆದುಕೊಂಡು ಹೋಗಿದ್ದಾನೆ
ಇತ್ತೀಚಿಗೆ ಪತ್ನಿ ಹೆರಿಗೆಗೆ ಎಂದು ತವರು ಮನೆಗೆ ಬಂದಿದ್ದರು. ರಾತ್ರಿ ವೇಳೆ ಪತ್ನಿ ಶೌಚಕ್ಕೆ ಹೋಗಿ ಬರುವಷ್ಟರಲ್ಲಿ ಮಗುವನ್ನು ದೇವರು ತೆಗೆದುಕೊಂಡು ಹೋಗಿದ್ದಾನೆ ಎಂದು ಪತಿಯ ಮುಂದೆ ಪತ್ನಿ ಸೇರಿ ನಾಲ್ಕು ಜನ ಕಿರಾತಕರು ಕಥೆ ಕಟ್ಟಿದ್ದರು.
ಹಂತಕರ ಮಾತು ಕೇಳಿ ಅನುಮಾನಗೊಂಡ ಪತಿ ಸಂತಪೂರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಎಫ್ಐಆರ್ ದಾಖಲಾಗಿದ್ದು, ಆರೈಕೆ ಮಾಡಲಾಗದೇ ಕಿರಾತಕರು 50 ದಿನದ ಹಸುಗೂಸನ್ನು ಕೊಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಮತ್ತೊಂದೆಡೆ ನಾಲ್ಕು ಜನರ ಮೂಡಢನಂಬಿಕೆಗೆ 50 ದಿನದ ಪುಟ್ಟ ಕಂದ ಬಲಿಯಾಯ್ತಾ ಎಂದು ಶಂಕೆ ವ್ಯಕ್ತವಾಗಿದೆ.
ತನಿಖೆ ಮಾಡಿದಾಗ ಪೊಲೀಸರ ಮುಂದೆ ಮಗುವನ್ನು ಕೊಲೆ ಮಾಡಿದ್ದಾಗಿ ನಾಲ್ಕು ಜನ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ, ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.



