ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕಾಂಗ್ರೆಸ್ ಹಲವಾರು ನಾಯಕರು ಪಕ್ಷ ತೊರೆಯಲು ನಿರ್ಧರಿಸಿದ್ದು, ಡಿಸೆಂಬರ್ ಅಂತ್ಯದಲ್ಲಿ ರಾಜ್ಯ ಮತ್ತು ದೇಶದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ನಗರದ ಪ್ರವಾಸ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹಿತ ಮತ್ತು ಜನರ ಕಲ್ಯಾಣದ ನಿಯತ್ತಿನ ಅಗತ್ಯವಿದೆ. ಇದ್ಯಾವುದು ಕಾಂಗ್ರೆಸ್’ ನಲ್ಲಿ ಇಲ್ಲದಿರುವುದೇ ಅದರ ಅವನತಿಗೆ ಕಾರಣವಾಗಿದೆ ಎಂದರು
ಯಾವ ಪಕ್ಷಕ್ಕೆ ನೀತಿ, ನಿಯತ್ತು ಮತ್ತು ನೇತೃತ್ವ ಇರುವುದಿಲ್ಲವೋ ಆ ಪಕ್ಷ ಜಗತ್ತಿನ ಭೂಪಟದಲ್ಲಿ ಇರಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ಈಗಿನ ಕಾಂಗ್ರೆಸ್ ಗೆ ಬಂದಿದೆ ಎಂದು ತಿಳಿಸಿದರು.
ಪಕ್ಷಕ್ಕೆ ಸಂಬಂಧವಿಲ್ಲದವರು ಆದೇಶ ಕಾಂಗ್ರೆಸ್ ಪಾಲಿಸುತ್ತಿದೆ. ಆ ಪಕ್ಷ ತೊರೆದವರು ಸತ್ಯ ಹೇಳುತ್ತಿದ್ದಾರೆ. ನಿರ್ದಿಷ್ಟ ಯೋಜನೆ ಹಾಗೂ ಕಾರ್ಯತಂತ್ರವಿಲ್ಲದ ಕಾಂಗ್ರೆಸ್ ಜನಮಾನಸದಿಂದ ದೂರ ಆಗುತ್ತಿದೆ ಎಂದು ಹೇಳಿದರು.
ಕಾಂಗ್ರಸ್ ಪಕ್ಷದ ಹಿರಿ-ಕಿರಿಯ ಮುಖಂಡರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಅದಕ್ಕೆ ಆಪರೇಷನ್ ಕಮಲ ಎನ್ನುತ್ತೀರೋ ಅಥವಾ ರಾಜಕೀಯ ಧೃವೀಕರಣ ಎನ್ನುತ್ತೀರೋ ಜನತೆಗೆ ಬಿಟ್ಟಿದ್ದು ಎಂದು ಮಾರ್ಮಿಕವಾಗಿ ಎಂದರು.
‘ಬಿ.ಎಸ್. ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿದ್ದು, ಅವರನ್ನು ಯಾರೂ ಕಟ್ಟಿ ಹಾಕಲು ಸಾಧ್ಯವಿಲ್ಲ. ಬಿಜೆಪಿಯನ್ನು ಬೆಳೆಸಿದ ನಾಯಕ ಅವರು. ಹಾಗೆ, ಬಿಜೆಪಿ ಸಹ ಯಡಿಯೂರಪ್ಪ ಅವರನ್ನು ಬೆಳೆಸಿದೆ. ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ ಎಂದಿರುವ ಅವರು, ಸದ್ಯದಲ್ಲಿಯೇ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ರಾಷ್ಟ್ರವಾದ, ವಿಕಾಸವಾದದ ನೆಲೆಯಲ್ಲಿ ಎದುರಿಸಲಿದ್ದೇವೆ’ ಎಂದರು.
‘ಬಿಜೆಪಿ ಸೀರಿಯಲ್ ಕಿಲ್ಲರ್’ ಎನ್ನುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ‘ಆಮ್ ಆದ್ಮಿ ಭ್ರಷ್ಟಾಚಾರದ ವಿರುದ್ಧ ಹುಟ್ಟಿಕೊಂಡ ಪಕ್ಷ. ಆದರೆ, ಇದೀಗ ಅವರೇ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಪಕ್ಷದ ಧ್ಯೇಯದ ಬಗ್ಗೆ ನಿಯತ್ತು ಇಲ್ಲದಿದ್ದರೆ ಹೆಚ್ಚುಕಾಲ ಉಳಿಗಾಲವಿಲ್ಲ. ಅಣಬೆ ಹುಟ್ಟಿದ ಹಾಗೆ ಅದು ಹುಟ್ಟಿದೆ, ಅಷ್ಟೇ ಶೀಘ್ರವಾಗಿ ಅಳಿಯಲಿದೆ’ ಎಂದು ವ್ಯಂಗ್ಯವಾಡಿದರು.
ಮುಖಂಡರಾದ ಮಹೇಶ ಟೆಂಗಿನಕಾಯಿ, ಅಶೋಕ ಕಾಟವೆ, ಸಂಜಯ ಕಪಟಕರ, ಚಂದ್ರಶೇಖರ ಗೋಕಾಕ, ವೀರಭದ್ರಪ್ಪ ಹಾಲಹರವಿ, ಪ್ರಭು ನವಲಗುಂದಮಠ ಇದ್ದರು.