ಹೊಸದಿಗಂತ ಡಿಜಿಟಲ್ ಡೆಸ್ಕ್
ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಜಗಳಕ್ಕೆ ಮಹಾ ಮಾಜಿ ಸಿಎಂ ಉದ್ಧವ್ ಠಾಕ್ರೆ ಎಂಟ್ರಿಯಾಗಿದ್ದು, ವಿವಾದದ ಬೆಂಕಿಗೆ ಹೆಚ್ಚುವರಿಯಾಗಿ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು “ಸುಪ್ರೀಂ ಕೋರ್ಟ್ ಗಡಿ ವಿಚಾರದ ಬಗ್ಗೆ ನಿರ್ಧರಿಸುವವರೆಗೆ, ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಬೇಕು” ಎಂದು ಆಗ್ರಹವನ್ನು ಮಾಡಿದ್ದಾರೆ.
ಗಡಿ ವಿಚಾರದಲ್ಲಿ ಕರ್ನಾಟಕ ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ನಮ್ಮ ಸಿಎಂ ಶಿಂಧೆ ಮೌನವಾಗಿದ್ದಾರೆ. ಸುಪ್ರೀಂ ತೀರ್ಪಿನವರೆಗೆ ಬೆಳಗಾವಿ, ಕಾರವಾರ, ನಿಪ್ಪಾಣಿಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ವಿಧಾನಸಭೆಯಲ್ಲಿ ಅಂಗೀಕರಿಸುವ ಪ್ರಸ್ತಾವನೆಯಲ್ಲಿ ಸೇರಿಸಬೇಕು” ಎಂದು ಉದ್ಧವ್ ಹೇಳಿದ್ದಾರೆ.
ಉದ್ಧವ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, “ನಾವು ಸುಪ್ರೀಂ ಅಥವಾ ಕೇಂದ್ರ ಎಲ್ಲಾದರೂ ಸರಿ ನಮ್ಮ ಪ್ರತಿ ಇಂಚು ಭೂಮಿಗಾಗಿ ಹೋರಾಡುತ್ತೇವೆ. ನಾವು ಗಡಿಯಲ್ಲಿ ವಾಸಿಸುವವರಿಗೆ ಆದ ಅನ್ಯಾಯದ ವಿರುದ್ಧ ಹೋರಾಡುತ್ತೇವೆ. ಮತ್ತು ಪ್ರಸ್ತಾವನೆಯನ್ನು ತರುತ್ತೇವೆ. ಮಹಾರಾಷ್ಟ್ರ ಗೆಲ್ಲಲಿದೆ. ಪಶ್ಚಾತ್ತಾಪ ಪಡಬೇಡ.” ಎಂದು ಹೇಳಿದರು.
ಭಾಷಾವಾರು ರಾಜ್ಯಗಳ ಮರುಸಂಘಟನೆಯ ನಂತರ ಎರಡು ರಾಜ್ಯಗಳ ನಡುವಿನ ಗಡಿ ಸಮಸ್ಯೆ 1957 ರ ಹಿಂದಿನದು. ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯ ಮೇಲೆ ಮಹಾರಾಷ್ಟ್ರವು ಹಕ್ಕು ಸಾಧಿಸುತ್ತಿದೆ. ಅದೇ ರೀತಿ ಹಲವು ಮಹಾರಾಷ್ಟ್ರ ಭಾಗಗಳು ಸ್ವಯಂ ಪ್ರೇರಿತವಾಗಿ ಕರ್ನಾಟಕ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ