ಹೊಸಸದಿಗಂತ ವರದಿ, ಮಡಿಕೇರಿ:
ವೀರಾಜಪೇಟೆ ಪಟ್ಟಣಕ್ಕೆ ಸಮೀಪದಲ್ಲೇ ಇರುವ ಪೆರುಂಬಾಡಿಯಲ್ಲಿ ಹುಲಿಯೊಂದು ಎರಡು ಹಸುಗಳ ಮೇಲೆ ದಾಳಿಸಿ ಒಂದನ್ನು ಹತ್ಯೆ ಮಾಡಿ ಮತ್ತೊಂದನ್ನು ಗಾಯಗೊಳಿಸಿರುವ ಘಟನೆ ನಡೆದಿದೆ.
ವೀರಾಜಪೇಟೆ ಪಟ್ಟಣದಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿರುವ ಪೆರುಂಬಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪಕ್ಕದ ರಾಮಯ್ಯ ಎಂಬವರ ಎರಡು ಹಸುಗಳನ್ನು ಮೇಯಲು ಬಿಟ್ಟಿದ್ದರೆನ್ನಲಾಗಿದೆ.
ಆದರೆ ರಾತ್ರಿಯಾದರೂ ಹಸುಗಳು ಮನೆಗೆ ಬರದ ಹಿನ್ನೆಲೆಯಲ್ಲಿ ಮರುದಿನ ರಾಮಯ್ಯ ಅವರು ಹುಡುಕಿಕೊಂಡು ಹೋಗುವ ಮಾರ್ಗದಲ್ಲಿ ವಸತಿ ಶಾಲೆಯ ಸಮೀಪದಲ್ಲಿ ಒಂದು ಹಸು ಶವವಾಗಿ ಬಿದ್ದಿರುವ ಹಾಗೂ ಮತ್ತೊಂದು ತೀವ್ರ ರಕ್ತ ಸ್ರಾವದಿಂದ ಸಾವು ಬದುಕಿನ ಜೊತೆ ಹೋರಾಟ ನಡೆಸುತ್ತಿದ್ದುದು ಗೋಚರಿಸಿದೆ.
ಈ ಕುರಿತು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದರಲ್ಲದೆ, ಹುಲಿಯನ್ನು ಹಿಡಿಯಲು ಸಂಪೂರ್ಣ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಅಲ್ಲದೆ ಹಸುವನ್ನು ಕಳೆದುಕೊಂಡ ರಾಮಯ್ಯ ಅವರಿಗೆ ಇಲಾಖೆಯ ವತಿಯಿಂದ ಪರಿಹಾರ ನೀಡಲು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಟ್ಟಣದಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿ, ಅದರಲ್ಲೂ ಜನನಿಬಿಡ ಪ್ರದೇಶದಲ್ಲಿ ಹುಲಿ ದಾಳಿ ನಡೆಸಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ