ಹೊಸದಿಗಂತ ವರದಿ,ಕಾಸರಗೋಡು:
ಕೇರಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ದಿನಂಪ್ರತಿ ನೀಡುತ್ತಿದ್ದ ಕೋವಿಡ್ ಅಂಕಿ ಅಂಶಗಳ ಪ್ರಕಟಣೆಯನ್ನು ಸೋಮವಾರದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರವು ನಿಲ್ಲಿಸಿ ನಿರ್ದೇಶನ ಹೊರಡಿಸಿದೆ.
ರಾಜ್ಯದಲ್ಲಿ ಕೋವಿಡ್ ವೈರಸ್ ಸೋಂಕು ವಿಪರೀತವಾಗಿ ಹರಡುತ್ತಿದ್ದ ವೇಳೆಯಲ್ಲಿ ಆರೋಗ್ಯ ಇಲಾಖೆ ಅಥವಾ ಸರಕಾರ ಪ್ರತೀ ದಿನ ಸಂಜೆ ಸೋಂಕು ಬಾಧಿತರ ಮಾಹಿತಿಗಳನ್ನು ಒದಗಿಸುತ್ತಿತ್ತು. ಜಿಲ್ಲಾವಾರು ಸೋಂಕಿತರ ಲೆಕ್ಕಾಚಾರ, ತಪಾಸಣೆ ನಡೆಸಿದ ಸ್ಯಾಂಪಲ್ ಗಳ ವಿವರ, ಸಾವಿನ ಸಂಖ್ಯೆ, ಚಿಕಿತ್ಸೆ ಪಡೆಯುವವರ ವಿವರ, ಗುಣಮುಕ್ತರಾದವರ ಸಂಖ್ಯೆ ಮೊದಲಾದ ಮಾಹಿತಿಗಳನ್ನು ಸರಕಾರವು ಹೊರಡಿಸುತ್ತಿತ್ತು.
ಅಲ್ಲದೆ ಕೊರೋನಾ ಏರಿಕೆಯ ಕಾಲದಲ್ಲಿ ದಿನಂಪ್ರತಿ ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ದಿಗೋಷ್ಠಿ ನಡೆಸಿ ಕೋವಿಡ್ ವಿವರಗಳನ್ನು ಜನರಿಗೆ ತಿಳಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಪ್ರತೀ ದಿನ ಕೋವಿಡ್ ಮಾಹಿತಿಗಳನ್ನು ನೀಡಿದ್ದು , ಇದೀಗ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ನಿಟ್ಟಿನಲ್ಲಿ ಇನ್ನು ಮುಂದೆ ಅದರ ಅಗತ್ಯವಿಲ್ಲ ಎಂದು ಸರಕಾರವು ತಿಳಿಸಿದೆ.