ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಕ್ಫ್ ಮಂಡಳಿಯಲ್ಲಿ ನೇಮಕಾತಿ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಎಎಪಿ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯವುಆದೇಶ ಕಾಯ್ದಿರಿಸಿದೆ.
ಖಾನ್ ಅವರಿಗೆ ಸಮನ್ಸ್ ಜಾರಿ ಮಾಡಬೇಕೆ ಎಂಬುದರ ಕುರಿತು ಏ.9ರಂದು ನಿರ್ಧರಿಸುವುದಾಗಿ ಮೆಟ್ರೊಪಾಲಿಟನ್ ಸಹ ಮುಖ್ಯ ನ್ಯಾಯಾಧೀಶೆ ದಿವ್ಯಾ ಮಲ್ಹೋತ್ರಾ ತಿಳಿಸಿದ್ದಾರೆ.
ಸಾಕ್ಷಿಯಾಗಿದ್ದ ಖಾನ್ ಅವರು ನಿರೀಕ್ಷಣಾ ಜಾಮೀನು ಪಡೆಯುವುದರ ಮೂಲಕ ಈಗ ಆರೋಪಿಯಾಗಿದ್ದಾರೆ. ಜತೆಗೆ ತನಿಖೆಯಿಂದ ತಪ್ಪಿಸಿಕೊಂಡು ಪರಾರಿಯಾಗುವ ಯೋಜನೆ ಹೊಂದಿದ್ದಾರೆ. ಖಾನ್ ಅವರು ವಿಚಾರಣೆಗೆ ಹಾಜರಾಗದ ಕಾರಣ ಪ್ರಕರಣದ ತನಿಖೆ ಮುಗಿಯುತ್ತಿಲ್ಲ’ ಎಂದು ಜಾರಿ ನಿರ್ದೇಶನಾಲಯ ಪರ ವಿಶೇಷ ಸರ್ಕಾರಿ ಅಭಿಯೋಜಕ ಸೈಮನ್ ಬೆಂಜಮಿನ್ ಹೇಳಿದ್ದಾರೆ.
‘ಈ ಪ್ರಕರಣದಲ್ಲಿರುವ ಇತರ ಆರೋಪಿಗಳಿಗೆ ಖಾನ್ ನೆರವಾಗಿದ್ದಾರೆ. ಹೀಗಾಗಿ ಹಗರಣದಲ್ಲಿ ಇವರ ಪಾತ್ರ ದೊಡ್ಡದಿದೆ. ಆರೋಪಿಯನ್ನು ಈ ಹಿಂದೆ ಬಂಧಿಸಲಾಗಿದೆ ಮತ್ತು ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
‘ದೆಹಲಿ ವಕ್ಫ್ ಮಂಡಳಿಯ ನೇಮಕಾತಿಯಲ್ಲಿ ಸಾಕಷ್ಟು ಅಕ್ರಮಗಳನ್ನು ಎಸಗಿರುವ ಖಾನ್, ಭಾರೀ ಮೊತ್ತದ ಹಣ ಪಡೆದಿದ್ದಾರೆ. ಜತೆಗೆ ಹಲವು ವಸ್ತುಗಳ ಖರೀದಿಯಲ್ಲೂ ತಮ್ಮ ಸಹವರ್ತಿಗಳೊಂದಿಗೆ ಜತೆಗೂಡಿ ಅಕ್ರಮ ಎಸಗಿದ್ದಾರೆ’ ಎಂದು ಕಳೆದ ಅಕ್ಟೋಬರ್ನಲ್ಲಿ ಜಾರಿ ನಿರ್ದೇಶನಾಲಯ ಆರೋಪಿಸಿತ್ತು.