ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರಜಾಪ್ರಭುತ್ವ (Democracy) ಅಪಾಯದಲ್ಲಿಲ್ಲ. ಜಾತಿವಾದ ಮತ್ತು ವಂಶಾಡಳಿತದ ರಾಜಕೀಯ ಅಪಾಯದಲ್ಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಕಾಂಗ್ರೆಸ್ಗೆ ಕುಟುಕಿದ್ದಾರೆ.
ಬಿಜೆಪಿಯಿಂದ (BJP) ಪ್ರಜಾಪ್ರಭುತ್ವಕ್ಕೆ ಅಪಾಯ ಎಂಬ ರಾಹುಲ್ ಗಾಂಧಿ ಟೀಕೆಗೆ ತಿರುಗೇಟು ಕೊಟ್ಟ ಶಾ , ಕಾಂಗ್ರೆಸ್ ನೇತೃತ್ವದ ಯುಪಿಎ (UPA) ಸರ್ಕಾರ ತಂದ ಶಾಸನದ ಆಧಾರದ ಮೇಲೆ ಲೋಕಸಭೆಯಿಂದ ರಾಹುಲ್ ಗಾಂಧಿ (Rahul Gandhi) ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಹೇಳಿದರು.
ಉತ್ತರ ಪ್ರದೇಶದ ಕೌಶಂಬಿ ಮಹೋತ್ಸವವನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜದ ಎಲ್ಲಾ ವರ್ಗಗಳ ಸರ್ವತೋಮುಖ ಕಲ್ಯಾಣಕ್ಕಾಗಿ 2024ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಶಾ ಜನರಿಗೆ ಕರೆ ನೀಡಿದರು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವತ್ತೂ ಸಭೆ, ಚರ್ಚೆ ಇಲ್ಲದೆ ಬಜೆಟ್ ಅಧಿವೇಶನ (Budgest Session) ಮುಗಿದಿರಲಿಲ್ಲ. ಆದರೆ ಈ ಬಾರಿ ಕಲಾಪ ನಡೆಸಲು ವಿಪಕ್ಷಗಳು ಬಿಡಲಿಲ್ಲ. ರಾಹುಲ್ ಗಾಂಧಿ ಅನರ್ಹತೆಯನ್ನು ಪ್ರಶ್ನಿಸಿ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿದ ವಿರೋಧ ಪಕ್ಷಗಳನ್ನು ದೇಶ ಯಾವತ್ತೂ ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಭಾರತದ ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್ ಜಾತೀಯತೆ, ರಾಜವಂಶದ ರಾಜಕೀಯ ಮತ್ತು ತುಷ್ಟೀಕರಣ ಮಾಡುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೂರನ್ನು ಸೋಲಿಸಿದ್ದಕ್ಕೆ ಕಾಂಗ್ರೆಸ್ಗೆ ಭಯ ಎಂದು ಹೇಳಿದರು.