ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರ ರಂಗೇರಿದೆ. ಮೇ 10ರಂದು ಮತದಾನ ನಡೆಯಲಿದ್ದು, ರಾಜ್ಯದ ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ರಾಜ್ಯ ಚುನಾವಣೆಗೆ ಇನ್ನು 9 ದಿನ ಮಾತ್ರ ಬಾಕಿ ಇದೆ. ಈಗ ಬುದ್ಧಿವಂತ ನಟ , ನಿರ್ದೇಶಕ ಉಪೇಂದ್ರ ತಮ್ಮ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಜೊತೆ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿದರು. ತಮ್ಮ ಉತ್ತಮ ಪ್ರಜಾಕೀಯ ಪಕ್ಷದ 110 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳನ್ನು ಪರಿಚಯಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನಟ ಉಪೇಂದ್ರ, ಪ್ರಜಾಕೀಯ app ಬಗ್ಗೆ ಮಾಹಿತಿ ನೀಡಿದರು. ಜನರ ಬೇಡಿಕೆ ನಮಗೆ ಗೊತ್ತಿದೆ. ಪಾರದರ್ಶಕ ವರದಿ ಕೊಡುತ್ತೇನೆ. ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ. ಪ್ರಜಾಕೀಯ ಬರೀ ವೋಟ್ ಹಾಕಿ ಅಂತಿಲ್ಲ ಎಂದರು.
ಈಗ 110 ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನಾನು ಆಯ್ಕೆ ಮಾಡಿಲ್ಲ. ಆಯಾ ಕ್ಷೇತ್ರದ ಮತದಾರ ಜನರು ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ನಾವು ಅವರಿಗೆ ಬಿ ಫಾರಂ ಕೊಟ್ಟಿದ್ದೀವಿ ಅಷ್ಟೇ. ನಮ್ಮ ಪಕ್ಷದ ಪರವಾಗಿ ಯಾರು ಪ್ರಚಾರ ಮಾಡಬೇಕಿಲ್ಲ. ಅಲ್ಲಿನ ಜನರಿಗೆ ಅವರು ಗೊತ್ತಿರಬೇಕು. ಜೊತೆಗೆ ಆ ಕ್ಷೇತ್ರದ ಅಭ್ಯರ್ಥಿಗಳು ಅಲ್ಲಿ ಹೋಗಿ ಜನರ ಸಮಸ್ಯೆ ಬಗ್ಗೆ ಪಟ್ಟಿ ಮಾಡಿ ಅದನ್ನು ಬಗೆಹರಿಸುವ ಪ್ರಯತ್ನ ಮಾಡಬೇಕು. ಅಲ್ಲದೆ ಆರು ತಿಂಗಳಿಗೊಮ್ಮೆ ಪಕ್ಷದಿಂದ ಮತದಾನ ನಡೆಸಲಾಗುತ್ತದೆ. ಈ ವೇಳೆ ಅಲ್ಲಿ ಯಾವ ಅಭ್ಯರ್ಥಿ ಸರಿಯಾಗಿ ಕೆಲಸ ಮಾಡುವುದಿಲ್ಲವೋ ಆ ಅಭ್ಯರ್ಥಿಯ ಕೆಳಗೆ ಇಳಿಸಬಹುದು ಎಂದರು.
ಪ್ರಜಾಕೀಯ appನಿಂದ ಜನರು ಪ್ರಚಾರ ಮಾಡುತ್ತಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷ ಆಗಿರುವುದರಿಂದ ಇದು ನಗದು ರಹಿತ ಪಕ್ಷ. ಇಲ್ಲಿ ಯಾವುದೇ ರೀತಿಯಲ್ಲಿ ಪಕ್ಷವು ಹಣ ಸಂಗ್ರಹಿಸುವುದಿಲ್ಲ. ಪಕ್ಷದ ಕಾರ್ಯಚಟುವಟಿಕೆಗಳ ಅನಿವಾರ್ಯ ವೆಚ್ಚಗಳನ್ನು ಮಾತ್ರ ಪಕ್ಷದ ಅಧ್ಯಕ್ಷರು ಭರಿಸುತ್ತಾರೆ. ಯಾವುದೇ ಕಾರ್ಯಕರ್ತರನ್ನು ಹೊಂದಿರುವುದಿಲ್ಲ. ಪ್ರಾದೇಶಿಕ ಕಚೇರಿಗಳಿರುವುದಿರಲ್ಲ. ಮೆರವಣಿಗೆ, ಬ್ಯಾನರ್ಗಳು, ಜನರನ್ನು ಒಟ್ಟುಗೂಡಿಸುವ ಪ್ರಮೇಯ ಇರುವುದಿಲ್ಲ ಎಂದರು.