April 29, 2026
Wednesday, April 29, 2026
spot_img

ರಸ್ತೆ ಕಾಮಗಾರಿ ಹಿನ್ನೆಲೆ ಸರಿಯಾದ ಬಸ್ ಸಂಚಾರ ಇಲ್ಲ: ಬೆಳ್ಳಂಬೆಳಗ್ಗೆ ಪ್ರತಿಭಟನೆಗೆ ಇಳಿದ ಜನ

ಹೊಸದಿಗಂತ ವರದಿ ಹಾವೇರಿ:

ಹಾವೇರಿ – ಹಾನಗಲ್ಲ – ಶಿರಸಿ ಭಾಗದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಮಾರ್ಗದಲ್ಲಿ ಓಡಾಡುವ ಬಸ್ ಗಳನ್ನು ಸಮರ್ಪಕವಾಗಿ ಓಡಿಸುತ್ತಿಲ್ಲ. ಇದರಿಂದ ದಿನನಿತ್ಯ ಉದ್ಯೋಗ ಮತ್ತು ಇತರ ಕಾರ್ಯಕ್ಕೆ ಓಡಾಡುವ ಜನರಿಗೆ ತೀವ್ರ ಸಮಸ್ಯೆ ಆಗಿದೆ. ಕೂಡಲೇ ಬಸ್ ಸಂಚಾರ ಸರಿಪಡಿಸಲು ಆಗ್ರಹಿಸಿ ಈ ಭಾಗದಲ್ಲಿ ಓಡಾಡುವ ನೂರಾರು ಜನ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಶಿಕ್ಷಕರು, ವಿದ್ಯಾರ್ಥಿಗಳು, ಬ್ಯಾಂಕ್ ಉದ್ಯೋಗಿಗಳು, ವಿವಿಧ ಸರ್ಕಾರಿ ಉದ್ಯೋಗಿಗಳು ಹೀಗೆ ಹಲವಾರು ಜನರು ಸಾರಿಗೆ ವ್ಯವಸ್ಥೆಗೆ ಅಸಮಾಧಾನ ಹೊರಹಾಕಿದರು. ಸರಿಯಾದ ಸಮಯಕ್ಕೆ ಉದ್ಯೋಗಕ್ಕೆ ಹಾಜರಾಗದೇ ಇದ್ದರೆ ಅರ್ಧ ದಿನದ ರಜೆ ಇಲ್ಲವೇ ಒಂದು ದಿನದ ರಜೆ ಹಾಕುತ್ತಾರೆ. ಸರಿಯಾದ ಸಮಯದಲ್ಲಿ ಬಸ್ ಓಡಿಸುತ್ತಿಲ್ಲ ಎಂದು ದೂರಿದರು.

ಇದನ್ನೂ ಓದಿ: Kitchen tips | ಗ್ಯಾಸ್ ಸ್ಟೌವ್ ದೀರ್ಘಕಾಲ ಬಾಳಿಕೆ ಬರಬೇಕಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಘಟನಾ ಸ್ಥಳಕ್ಕೆ ಆಗಮಿಸಿದ ಡಿಪೋ ಮ್ಯಾನೇಜರ್ ಪ್ರಶಾಂತ್ ಪ್ರತಿಕ್ರಿಯಿಸಿ, ರಸ್ತೆ ಕಾಮಗಾರಿ ನಡೆದಿರುವುದರಿಂದ ಇಂದು ಸಮಸ್ಯೆಯಾಗಿದೆ, ಈ ಮಾರ್ಗ ಕ್ಕೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಎರಡು ಹೆಚ್ಚುವರಿ ಬಸ್ ಓಡಿಸಲಾಗುವುದು ಎರಡು ದಿನಗಳ ಕಾಲಾವಕಾಶ ನೀಡಿ ಎಂದರು. ಇದಕ್ಕೆ ಆಕ್ಷೇಪಿಸಿದ ಸಾರ್ವಜನಿಕರು ಕಳೆದ ಆರು ತಿಂಗಳಿಂದ ಪೋನ್ ಮಾಡಿ ಹೇಳುತ್ತಿದ್ದೇವೆ, ಮೌಖಿಕ ಮನವಿ ಮಾಡುತ್ತಿದ್ದೇವೆ ನಮ್ಮ ಮನವಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆ.ಎಸ್.ಆರ್.ಟಿ.ಸಿ ಡಿಸಿ ಸ್ಥಳಕ್ಕೆ ಬರಲೇ ಬೇಕೆಂದು ಆಗ್ರಹಿಸಿದರು.

ನಂತರ ಬಸ್ ವ್ಯವಸ್ಥೆ ಸರಿಪಡಿಸಲು ಎರಡು ದಿನಗಳ ಅವಕಾಶ ನೀಡುವುದಾಗಿ ತಿಳಿಸಿ, ಮನವಿ ಸಲ್ಲಿಸಿದರು. ಈ ವೇಳೆ ರಾಬಿಯಾ, ಸುಮಂಗಲಾ, ರಜತ್, ನೂರ್ ಅಹ್ಮದ, ಚಿರಾಗ್, ನವೀನ್ ಸೇರಿದಂತೆ ನೆಲೋಗಲ್ ಹಾಗೂ ಹಾನಗಲ್ಲ ಜಿಟಿಟಿಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !