ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ದಿನಗಳಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಆಗುವ ಬದಲಾವಣೆ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಸೂಚನೆ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ನಂತಹ ಇಂಧನಗಳಿಂದ ಸಂಚರಿಸುವ ವಾಹನಗಳಿಗೆ ಭವಿಷ್ಯವಿಲ್ಲ ಎಂದು ತಿಳಿಸಿದ್ದಾರೆ.
ಬಸ್ವರ್ಲ್ಡ್ ಇಂಡಿಯಾ ಕಾನ್ಕ್ಲೇವ್ನಲ್ಲಿ ಮಾತನಾಡಿದ ಸಚಿವ ಗಡ್ಕರಿ, ದೇಶದಲ್ಲಿ ಇನ್ನು ಹೆಚ್ಚು ಹೆಚ್ಚು ಜೈವಿಕ ಇಂಧನಗಳು, ಸಿಎನ್ಜಿ , ಎಲ್ಎನ್ಜಿ ಮತ್ತು ವಿದ್ಯುತ್ ಚಾಲಿತ ವಾಹನಗಳ ನಿರ್ಮಾಣಕ್ಕೆ ಆಟೋಮೊಬೈಲ್ ಗಳು ಮುಂದಾಗಬೇಕು. ಇದರಿಂದ ಪರಿಸರ ರಕ್ಷಣೆಯ ಜೊತೆಗೆ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕೂಡ ಆಗಲಿದೆ ಎಂದು ತಿಳಿಸಿದರು.
ಹೈಡ್ರೋಜನ್ ಮುಂದಿನ ದಿನಗಳ ಭವಿಷ್ಯದ ಇಂಧನವಾಗಿದೆ. ಪ್ರಸುತ್ತ ದೇಶದಲ್ಲಿ ಹೈಡ್ರೋಜನ್ ಟ್ರಕ್ಗಳು ಮತ್ತು ಬಸ್ಗಳನ್ನು ಓಡಿಸಲು 10 ಮಾರ್ಗಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಇಂದು ದೇಶದಲ್ಲಿ ಎಲೆಕ್ಟ್ರಿಕ್ ಬಸ್ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ 1,50,000 ಯೂನಿಟ್ಗಳಿಗೆ ತಲುಪುವ ನೀರಿಕ್ಷೆ ಇದೆ. ಈ ಮೂಲಕ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದರು.



