ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸಾಕಷ್ಟು ನೊಂದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಹೆಚ್.ಡಿ.ದೇವೇಗೌಡರನ್ನ (H.D.Deve Gowda) ಪದ್ಮನಾಭನಗರ ನಿವಾಸದಲ್ಲಿ ಭೇಟಿಯಾಗಿ ನಿಖಿಲ್ ಆರೋಗ್ಯ ವಿಚಾರಿಸಿದರು.
ಬಳಿಕ ಮಾತನಾಡಿದ ಅವರು, ಈ ವಿಷಯವನ್ನು ರಾಜಕೀಯವಾಗಿ ಜನರಿಗೆ ತಪ್ಪು ಸಂದೇಶ ಕೊಡುವ ಕೆಲಸ ಆಗ್ತಿದೆ ಎಂದು ಬೇಸರ ಹೊರಹಾಕಿದರು.
ಕುಮಾರಸ್ವಾಮಿ, ದೇವೇಗೌಡರು ಹಲವಾರು ವರ್ಷಗಳಿಂದ ರಾಜಕೀಯದಲ್ಲಿ ಇದ್ದಾರೆ. ವಿಶೇಷವಾಗಿ ದೇವೇಗೌಡರ ವೈಯಕ್ತಿಕ ಬದುಕು ತೆರೆದ ಪುಸ್ತಕ. ಅದರಲ್ಲಿ ಮುಚ್ಚುಮರೆ ಇಲ್ಲ. ದೇವೇಗೌಡರಾಗಲಿ, ಅಜ್ಜಿ ಚೆನ್ನಮ್ಮ ಅವರಾಗಲಿ ನಮ್ಮಂತ ಯುವಕರಿಗೆ ಸ್ಫೂರ್ತಿ. ದಂಪತಿ ಯಾವ ರೀತಿ ಬಾಳಿ ಬದುಕಬೇಕು ಅನ್ನೋದಕ್ಕೆ ಅವರಿಗಿಂತ ಉದಾಹರಣೆ ಯಾರು ನನಗೆ ಕಾಣೋದಿಲ್ಲ ಎಂದರು.
ಕೈ ಜೋಡಿಸಿ ಮನವಿ ಮಾಡ್ತೀನಿ. ದೇವೇಗೌಡರಿಗೆ 91, 92 ವರ್ಷ ಈಗ. ಸಹಜವಾಗಿ ಇಂತಹ ವಿಷಯ ಕೇಳಿದ ಮೇಲೆ ದೇವೇಗೌಡರ ಮೇಲೆ ಯಾವ ರೀತಿ ಪರಿಣಾಮ ಆಗಿರುತ್ತೆ, ಅಘಾತವಾಗಿರುತ್ತೆ ಅಂತ ಯಾರು ಊಹೆ ಮಾಡಲು ಸಾಧ್ಯವಿಲ್ಲ. ಇವತ್ತು ಕೂಡಾ ಬೆಳಗ್ಗೆ 5:30 ಕ್ಕೆ ದೇವಸ್ಥಾನ ಹೋಗಿ ಬಂದೆ. ಈಗ ವಿಶ್ರಾಂತಿ ಪಡೆಯುತ್ತಿದ್ದೇನೆ ಅಂತಾ ಹೇಳಿದರು. ದೇವೇಗೌಡರು ಸಾಕಷ್ಟು ನೊಂದಿದ್ದಾರೆ. ಇಡೀ ರಾಜ್ಯದ ಜನತೆಗೂ ಕೂಡಾ ದೇವೇಗೌಡ ಮನಸಿನ ಮೇಲೆ ಯಾವ ರೀತಿ ಪರಿಣಾಮ ಬೀರಿರಬೇಕು ಅಂತಾ ಎಲ್ಲರಿಗೂ ಗೊತ್ತಿರುವ ವಿಷಯ. ದೇವೇಗೌಡರು ಮತ್ತು ನಮ್ಮ ಅಜ್ಜಿ ಸಾಕಷ್ಟು ನೋವಿನಲ್ಲಿ ಇದ್ದಾರೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೇವೇಗೌಡ, ಕುಮಾರಸ್ವಾಮಿಯವರನ್ನ ಎಳೆದು ತರೋದು ಸರಿಯಲ್ಲ. ಈಗಾಗಲೇ ಆರೋಪಿ ಸ್ಥಾನದಲ್ಲಿ ಇರೋರ ಬಗ್ಗೆ SIT ತನಿಖೆ ಆಗ್ತಿದೆ. ಕಾನೂನಿಗಿಂತ ಯಾರು ದೊಡ್ಡವರು ಇಲ್ಲ. ತಪ್ಪು ಮಾಡಿದ್ರೆ ತಲೆ ಬಾಗಲೇಬೇಕು. ತಪ್ಪಿಸಿಕೊಳ್ಳೋ ಪ್ರಶ್ನೆ ಇಲ್ಲ. SIT ರಚನೆ ಆಗಿದೆ. ತನಿಖೆ ಆಗ್ತಿದೆ. ಅಂತಿಮವಾಗಿ ತನಿಖಾ ವರದಿ ಬಂದ ಮೇಲೆ ಮುಂದಿನ ದಿನಗಳಲ್ಲಿ ಮಾತಾಡ್ತೀನಿ ಎಂದರು.
ವೀಡಿಯೋ ಲೀಕ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಬಹಳ ದುಃಖ ತಂದ ವಿಷಯ ವೀಡಿಯೋ ಬ್ಲರ್ ಮಾಡದೇ ಇರೋದು. ನಾನು ಆ ವೀಡಿಯೋ ನೋಡೋ ಧೈರ್ಯ ಮಾಡಲಿಲ್ಲ. ನಮ್ಮ ಸುತ್ತಮುತ್ತ ಇರುವವರು ಹೇಳಿದರು. ಇಂತಹ ವೀಡಿಯೋ ಇರೋ ಸಮಯದಲ್ಲಿ ಬ್ಲರ್ ಮಾಡ್ತಾರೆ. ಆದರೆ ಪಾಪ ಆ ಹೆಣ್ಣುಮಕ್ಕಳನ್ನು ಸೋಶಿಯಲ್ ಮೀಡಿಯಾದಲ್ಲಿ ಮುಖ ಕಾಣೋ ರೀತಿ ಅದನ್ನು ತೋರಿಸಿದ್ದಾರೆ. ವೀಡಿಯೋ ಬಿಡುಗಡೆ ಬಗ್ಗೆಯೂ ಹೆಚ್ಚಿನ ತನಿಖೆ ಆಗಬೇಕು ಎಂದು ಆಗ್ರಹಿಸಿದರು.